ಬೆಂಗಳೂರು : ಸರ್ಕಾರ ಯಾವ ಯೋಜನೆಗಳು, ನಿಯಮಾವಳಿಗಳನ್ನು ಜಾರಿಗೆ ತಂದರೂ ಅದರ ಬಿಸಿ ಮೊದಲು ತಟ್ಟುವುದು ಸಣ್ಣ ಹಾಗೂ ಮಧ್ಯಮ ವರ್ಗದವರಿಗೆ. ಲಾಕ್ಡೌನ್ ಹಿನ್ನೆಲೆ ನಷ್ಟದಲ್ಲಿರುವ ಬಿಎಂಟಿಸಿ ಸಂಸ್ಥೆ ಸಾರ್ವಜನಿಕರಿಂದ ದುಪ್ಪಟ್ಟು ಹಣ ಸೂಲಿ ಮಾಡುವ ಮೂಲಕ ತನ್ನ ಖಜಾನೆ ಭರ್ತಿ ಮಾಡಿಕೊಳ್ಳಲು ಮುಂದಾಗಿರುವುದಕ್ಕೆ ಪ್ರಯಾಣಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಲಾಕ್ಡೌನ ಸಡಿಲಿಕೆ ನಂತರ ಹೆಚ್ಚುವರಿ ಬಸ್ಗಳನ್ನು ರಸ್ತೆಗಿಳಿಸಿರುವ ಬಿಎಂಟಿಸಿ ಟಿಕೆಟ್ ವಿತರಿಸದೆ ದಿನ ಹಾಗೂ ವಾರದ ಪಾಸ್ಗಳನ್ನು ವಿತರಿಸುವ ಮೂಲಕ ಸ್ಟಾಕ್ ಇಟ್ಟುಕೊಂಡಿದ್ದ ಪಾಸುಗಳನ್ನು ಬಿಕರಿ ಮಾಡುವುದರ ಜತೆಗೆ ಪ್ರಯಾಣಿಕರ ಜೇಬಿಗೂ ಕತ್ತರಿ ಹಾಕುವ ಕೆಲಸ ಮಾಡುತ್ತಿದೆ. ಮನೆಕೆಲಸ, ಸಣ್ಣಪುಟ್ಟ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು, ಕಚೇರಿಗೆ ತೆರಳುವವರು 10, 20 ರೂ. ಕೊಟ್ಟು ಟಿಕೆಟ್ ಕೊಂಡು ಹೋಗುವವರು ಈಗ 70 ರೂ. ದಿನದ ಪಾಸ್ ಖರೀದಿಸಿಯೇ ಪ್ರಯಾಣಿಸಬೇಕಾಗಿದೆ.
ಇತ್ತ ಬಸ್ನಲ್ಲೂ ಹೋಗದೆ ಅತ್ತ 30 ರೂ. ಕೊಟ್ಟು ಆಟೋದಲ್ಲೋ ಹೋಗಲು ಆಗದೆ ಸಾರ್ವಜನಿಕರು ನಡಿಗೆಯಲ್ಲೇ ಹೋಗುತ್ತಿರುವ ದೃಶ್ಯ ನಗರದಲ್ಲಿ ಸರ್ವೆ ಸಾಮಾನ್ಯ.