ಪ್ರೇಮಿಗಳು ಒಂದೇ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ

ಪ್ರೇಮಿಗಳು ಒಂದೇ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ

ಬೆಳಗಾವಿ : ಮದುವೆ ಬಳಿಕ ಪ್ರೀತಿ ಮುಂದುವರಿಸಿದ್ದ ಜೋಡಿಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಒಂದೇ ಮರಕ್ಕೆ ಅಕ್ಕಪಕ್ಕದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಪಂಚಪ್ಪ ಹಾಗೂ ಸಕ್ಕೂಬಾಯಿ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೇಮ ವಿವಾಹಕ್ಕೆ ಉಭಯ ಕುಟುಂಬಸ್ಥರು ಅವಕಾಶ ನೀಡದ್ದಕ್ಕೆ ನಾಲ್ಕು ವರ್ಷಗಳ ಹಿಂದೆ ಪಂಚಪ್ಪ ಬೇರೆ ಯುವತಿಯೊಂದಿಗೆ ವಾಹವಾಗಿದ್ದನು. ವಿವಾಹವಾದರೂ ಸಕ್ಕೂಬಾಯಿಯೊಂದಿಗೆ ಸಲುಗೆಯಿಂದ ಇದ್ದನು. ಈ ಪ್ರೀತಿ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು.

ಕಳೆದ ತಿಂಗಳವಷ್ಟೇ ಸಕ್ಕೂಬಾಯಿಗೆ ಬೇರೆ ಯುವಕನೊಂದಿಗೆ ವಿವಾಹ ಮಾಡಿ ಕೊಡಲಾಗಿತ್ತು. ಮದುವೆ ಬಳಿಕ ಪತಿ ಮನೆಗೆ ಹೋಗಲು ಸಕ್ಕೂಬಾಯಿಗೆ ಇಷ್ಟ ಇರಲಿಲ್ಲ. ಪಂಚಪ್ಪ ಹಾಗೂ ಸಕ್ಕೂಬಾಯಿ ಮದುವೆ ನಂತರ ತಮ್ಮ ಪ್ರೀತಿ ಮುಂದುವರಿಸಿದ್ದರು. ಗಂಡನ ಮನೆಗೆ ಹೋದರೆ ನಾವಿಬ್ಬರೂ ಬೇರೆ ಆಗುತ್ತೇವೆ ಎಂಬ ಭಯದಿಂದ ಇಬ್ಬರೂ ಒಂದೇ ಗಿಡಕ್ಕೆ ಒಂದೇ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾರೆ.

ಕೂಡಲೇ ಎರಡೂ ಕುಟುಂಬಸ್ಥರು ಬಂದು ಹೌಹಾರಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ಕುರಿತು ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related