ಬೆಂಗಳೂರು: ಕೋವಿಡ್-19 ಸೋಂಕು ನಿರ್ವಹಣೆ ಸಂಬಂಧ ದೂರುಗಳು ಬರಕೂಡದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿರುವ ಕೋವಿಡ್ 19 ಝೋನಲ್ ಕಮಾಂಡರ್ ಸೆಂಟರ್ ಸೇರಿದಂತೆ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ದಿಢೀರ್ ಭೇಟಿ ಮಾಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಈ ಮೂಲಕ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.
ಕೋವಿಡ್ ನಿರ್ವಹಣೆಯಲ್ಲಿ ಯಾವುದೇ ಅವ್ಯವಸ್ಥೆ ಇಲ್ಲಿ ಇಲ್ಲ, ಹೊಸತಾಗಿ ವ್ಯವಸ್ಥೆ ಮಾಡಿಕೊಳ್ಳುವಾಗ ಸಣ್ಣಪುಟ್ಟ ಗೊಂದಲಗಳಾಗುವುದು ಸಹಜ. ನಮ್ಮ ವೈದ್ಯರು ಹಾಗೂ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಸಾರ್ವಜನಿಕರು ಸಹ ಭಯಗೊಳ್ಳುವುದು ಬೇಡ. ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಝೋನಲ್ ಕಮಾಂಡರ್ ಸೆಂಟರ್ ಕೆಲಸ ಹೇಗೆ?
ಈ ಕೋವಿಡ್- 19 ಝೋನಲ್ ಕಮಾಂಡರ್ ಸೆಂಟರ್ ನಲ್ಲಿ ಸೋಂಕಿತರ ಬಗೆಗಿನ ಸಂಪೂರ್ಣ ವಿವರಗಳನ್ನು ಕಲೆ ಹಾಕಲಾಗುತ್ತದೆ. ಕೋವಿಡ್ 19 ಪಾಸಿಟಿವ್ ವರದಿ ಬಂದ ಕೂಡಲೇ ಈ ಕೇಂದ್ರದ ಸಿಬ್ಬಂದಿ, ಆಂಬುಲೆನ್ಸ್, ಬಿಬಿಎಂಪಿ ಅಧಿಕಾರಿಗಳು, ಸೋಂಕಿತರ ಮನೆಯವರಿಗೆ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರ ವ್ಯವಸ್ಥೆ ಮಾಡುವಂತೆ ಮಾಹಿತಿ ನೀಡುತ್ತಾರೆ. ಬಳಿಕ ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಆ ರೋಗಿಯ ಬಗ್ಗೆ ವೈದ್ಯರು ಸಹಿತ ಹಲವರಿಂದ ಮಾಹಿತಿ ಕಲೆಹಾಕಲಾಗುತ್ತದೆ. ಅಲ್ಲದೆ, ಸಮಸ್ಯೆಗಳಿದ್ದರೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ.