ಮೈಸೂರು: ಮೈಸೂರಿನ ಹೊರವಲಯದ ಮಂಡಕಳ್ಳಿಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನೂತನ ಕಟ್ಟಡ ಅಕಾಡೆಮಿಕ್ ಭವನದಲ್ಲಿ ಸ್ಥಾಪಿಸಿರುವ ನೂತನ ಕೋವಿಡ್ ಕೇರ್ ಸೆಂಟರ್ ಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸುಮಾರು 55 ರೂಂ ಇದ್ದು, 600 ಬೆಡ್ ವರೆಗೆ ವ್ಯವಸ್ಥೆ ಮಾಡಬಹುದು. ಒಂದೆರೆಡು ದಿನದಲ್ಲಿ ಸಂಪೂರ್ಣ ಸಿದ್ಧವಾಗಲಿದೆ. ಪ್ರತಿ ಕೊಠಡಿಗೆ ಟಿ.ವಿ. ಕೇಬಲ್ ಸಂಪರ್ಕ, ಇಂಟರ್ನೆಟ್ ಸಂಪರ್ಕ, ವೈಫೈ ವ್ಯವಸ್ಥೆ, ಸ್ನಾನದ ಕೊಠಡಿ, ಶೌಚಾಲಯ, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಪ್ರತ್ಯೇಕ ವಿಭಾಗ, ಆಡಳಿತ ವಿಭಾಗದ ವ್ಯವಸ್ಥೆ ಮಾಡಲಾಗಿದೆ. 100 ಜನರಿಗೆ ಇಬ್ಬರು ಸ್ಟಾಫ್ ನರ್ಸ್, ಒಬ್ಬರು ವೈದ್ಯರು ಕೆಲಸ ಮಾಡುವರು ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು ವಿಧಾನಸೌಧಕ್ಕೆ ಬನ್ನಿ ನಿಮಗೆ ಬೇಕಾದ ದಾಖಲೆ ಕೊಡುತ್ತೇವೆ. ಕೊರೊನಾ ವಿಚಾರದಲ್ಲಿ ಅವ್ಯವಹಾರ ಮಾಡುವವರು ಮನುಷ್ಯತ್ವ ಇಲ್ಲದವರು. ನಾವು ವೆಚ್ಚ ಮಾಡಿರುವುದೇ 550ಕೋಟಿ ರೂ. ಹೀಗಿರುವಾಗ 2 ಸಾವಿರ ಕೋಟಿ ಅವ್ಯವಹಾರ ಎನ್ನುತ್ತಿದ್ದಾರೆ ಇದು ಹೇಗೆ ಸಾಧ್ಯ. ಯಾವುದೇ ಅವ್ಯವಹಾರ ನಡೆದಿಲ್ಲ ಎಂದರು.