ವಿಶೇಷ ಚೇತನನ ಅಳಿಲು ಸೇವೆ

  • In State
  • March 30, 2020
  • 468 Views
ವಿಶೇಷ ಚೇತನನ ಅಳಿಲು ಸೇವೆ

ಮಂಡ್ಯ, ಮಾ. 30: ಕೃಷ್ಣರಾಜಪೇಟೆ ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದಲ್ಲಿ ಕೊರೋನಾ ಸೋಂಕು ತಡೆಗೆ ಜನತೆಗೆ ಅಗತ್ಯವಾಗಿ ಬೇಕಾಗಿರುವ ಮಾಸ್ಕುಗಳನ್ನು ವಿಕಲಚೇತನ ಟೈಲರ್ ಒಬ್ಬರು ಗ್ರಾಮೀಣ ಜನತೆಗೆ ಉಚಿತವಾಗಿ ಹೊಲೆದು ಕೊಡುವ ಮೂಲಕ ದುಪ್ಪಟ್ಟು ದರಕ್ಕೆ ಮಾಸ್ಕುಗಳನ್ನು ಮಾರುತ್ತಿರುವ ಔಷಧಿ ಅಂಗಡಿಯವರಿಗೆ ನಾಚಿಕೆಯಾಗುವಂತಹ ಪುಣ್ಯದ ಕೆಲಸ ಮಾಡುತ್ತಿರುವ ಬಗ್ಗೆ ವರದಿಯಾಗಿದೆ.

ಕೃಷ್ಣರಾಜಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಬೊಮ್ಮೇನಹಳ್ಳಿ ಗ್ರಾಮದ ನಾಗರಾಜೇಗೌಡ ಮತ್ತು ಸಾಕಮ್ಮ ದಂಪತಿಗಳ ಪುತ್ರ ಮಂಜುನಾಥ್ ಅವರು ಒಂದು ಕಾಲು ಇಲ್ಲದಿದ್ದರೆ ಕೃತಕ ಕಾಲು ಜೋಡಣೆಯ ಮೂಲಕ ಕಳೆದ 12 ವರ್ಷಗಳಿಂದ ಟೈಲರ್ ವೃತ್ತಿ ಮಾಡುತ್ತಾ ತಮ್ಮ ತಾಯಿ ಸಾಕಮ್ಮ, ಅಜ್ಜಿ ಬೋರಮ್ಮ ಅವರನ್ನು ಸಹ ಸಾಕಿ ಸಲುಹುವ ಜವಾಬ್ದಾರಿಯೂ ಸಹ ಮಂಜುನಾಥ್ ಅವರ ಮೇಲಿದೆ.

ಕುಟುಂಬದ ಬಡತನದ ಹಿನ್ನೆಲೆಯಲ್ಲಿ ಸುಮಾರು 25 ವರ್ಷಗಳ ಹಿಂದೆಯೇ ಮನೆ ಬಿಟ್ಟು ಹೋದ ಅಪ್ಪ ನಾಗರಾಜೇಗೌಡ ಅವರ ದುಃಖದಿಂದ ದಿನ ದೂಡುತ್ತಾ ಜೀವನ ನಿರ್ವಹಣೆಗಾಗಿ ಟೈಲರ್ ವೃತ್ತಿಯನ್ನು ಮಂಜುನಾಥ್ ಮಾಡುತ್ತಿದ್ದಾರೆ. ಕೊರೋನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಯಲು ಅಗತ್ಯವಾಗಿ ಪ್ರತಿಯೊಬ್ಬರಿಗೂ ಅವಶ್ಯಕತೆ ಇರುವ ಮಾಸ್ಕುಗಳ ಅಭಾವವು ಮಾರುಕಟ್ಟೆಯಲ್ಲಿ ಇರುವುದನ್ನು ತಿಳಿದು ಸ್ವತಃ ಟೈಲರ್ ಆಗಿರುವ ನಾನೇಕೆ ಮಾಸ್ಕುಗಳನ್ನು ತಯಾರಿಸಿಕೊಡುವ ಮೂಲಕ ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸಬಾರದು ಎಂದು ನಿರ್ಧರಿಸಿ ಕಳೆದ ಒಂದು ವಾರದಿಂದಲೂ ಬಟ್ಟೆಯಿಂದ ಮಾಸ್ಕುಗಳನ್ನು ಹೊಲೆದು ನಮ್ಮ ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮಗಳ ಜನತೆಗೆ ಉಚಿತವಾಗಿ ನೀಡುತ್ತಿದ್ದೇನೆ ಎಂದು ತಿಳಿಸಿದರು.

Related