ಖಾಸಗಿ ಆಸ್ಪತ್ರೆಗಳು ವಶಕ್ಕೆ ಪಡೆಯಲು ಆಗ್ರಹ

ಖಾಸಗಿ ಆಸ್ಪತ್ರೆಗಳು ವಶಕ್ಕೆ ಪಡೆಯಲು ಆಗ್ರಹ

ಬಳ್ಳಾರಿ : ರಾಜ್ಯದಲ್ಲಿ ಕೋವಿಡ್ ತುರ್ತು ಪರಿಸ್ಥಿತಿಯನ್ನು ಘೋಷಿಸಿ, ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಬೇಕು ಎಂದು ಸಿಪಿಐಎಂ ರಾಜ್ಯ ಸಮಿತಿ ಕಾರ್ಯದರ್ಶಿ ಯು.ಬಸವರಾಜ್ ಆಗ್ರಹಿಸಿದರು.

ಕೋವಿಡ್ ನಿಯಂತ್ರಣ ಸಂಬಂಧ ಮುಖ್ಯಮಂತ್ರಿ ಸರ್ವ ಪಕ್ಷಗಳ ಸಭೆ ಏ.18 ರಂದು ಏರ್ಪಡಿಸಿದ್ದಾರೆ. ಸಿಪಿಐಎಂಗೆ ಆಹ್ವಾನ ಇಲ್ಲದಿರುವುದರಿಂದ ಅವರಿಗೆ ಬಹಿರಂಗ ಪತ್ರ ಬರೆದು ಕೋವಿಡ್ ತುರ್ತು ಪರಿಸ್ಥಿತಿ ಘೋಷಿಸಬೇಕೆಂದು ಆಗ್ರಹಿಸುತ್ತಿದ್ದೇವೆ’ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಸಿದ್ಧತೆ ಮತ್ತು ಮುಂಜಾಗ್ರತೆವಹಿಸಿಲ್ಲ. ಹೀಗಾಗಿಯೇ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ಹೆಸರಲ್ಲಿ ಜನರನ್ನು ಸುಲಿಗೆ ಮಾಡುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್ ಮೊದಲ ಲಸಿಕೆ ಪಡೆದವರು ಎರಡನೇ ಲಸಿಕೆ ಪಡೆಯಲು ಕೊರತೆಯ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಬೇಕು. ಎಲ್ಲಾ ಆಸ್ಪತ್ರೆಗಳ ಅರ್ಧದಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.

ಮುಂದಿನ ಆರು ತಿಂಗಳವರೆಗೆ ಕೋವಿಡ್ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲ ಕುಟುಂಬಗಳಿಗೂ ಮಾಸಿಕ 10 ಸಾವಿರ ನೆರವು ನೀಡಬೇಕು. ತಲಾ 10 ಕೆ.ಜಿ ಧಾನ್ಯ ನೀಡಬೇಕು ಎಂದು ಆಗ್ರಹಿಸಿದರು.

‘ಕೋವಿಡ್ ಸುರಕ್ಷತೆ ಕ್ರಮಗಳೊಂದಿಗೆ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಬೇಕು. ವೃದ್ಧರು, ಒಂಟಿಯಾಗಿ ವಾಸಿಸುವವರನ್ನು ಗುರುತಿಸಿ ನೇರವಾಗಿ ಊಟದ ಪೊಟ್ಟಣಗಳನ್ನು ಪೂರೈಸಬೇಕು’ ಎಂದು ಒತ್ತಾಯಿಸಿದರು.

ನಗರ ಸಮಿತಿ ಕಾರ್ಯದರ್ಶಿ ಸಿಪಿಐಎಂ ಜಿಲ್ಲಾ ಕಾರ್ಯ ದರ್ಶಿ ಜೆ. ಸತ್ಯಬಾಬು, ನಗರ ಕಾರ್ಯ ದರ್ಶಿ ಚಂದ್ರಕುಮಾರಿ ಇದ್ದರು.

Related