ಹೆಬ್ಬಾಳು ಗ್ರಾ.ಪಂ ಅಧ್ಯಕ್ಷ ನಾಗರಾಜು ಮೇಲೆ ಬೇಲೂರು ಪಿಎಸ್ಐ ಹಲ್ಲೆ ಪ್ರಕರಣವನ್ನು ಖಂಡಿಸಿ ಪೊಲೀಸ್ ಠಾಣೆ ಮುಂಭಾಗ ಶಾಸಕರ ನೇತೃತ್ವದಲ್ಲಿ ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ತಾಲೂಕಿನ ಶಿವಾಲದಹಳ್ಳಿ ಗ್ರಾಮದ ಯುವತಿ ನಾಪತ್ತೆಯಾದ ಹಿನ್ನಲೆಯಲ್ಲಿ ಗುರುವಾರ ಹೆಬ್ಬಾಳು ಗ್ರಾ.ಪಂ ಅಧ್ಯಕ್ಷ ನಾಗರಾಜು ಜೊತೆ ಪೋಷಕರು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದರು.
ಈ ಸಂದರ್ಭದಲ್ಲಿ ಠಾಣೆಯಲ್ಲಿದ್ದ ಪಿಎಸ್ಐ ಶಿವನೇಗೌಡ ಪಾಟೀಲ್ ದೂರು ಪ್ರತಿ ಸರಿಯಿಲ್ಲ. ಯುವತಿ ಎಲ್ಲಿಂದ ನಾಪತ್ತೆಯಾಗಿದ್ದಾಳೆ ಎಂದು ಬರೆದಿಲ್ಲ ಎಂದು ಉಡಾಫೆಯಿಂದ ವರ್ತಿಸಿ ಗ್ರಾ.ಪಂ ಅಧ್ಯಕ್ಷನ ಮುಖ ಮೂತಿಗೆ ಬಾರಿಸಿ ಬಾಗಿಲು ಹಾಕಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದರು. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಎಎಸ್ಐ ಗ್ರಾ.ಪಂ ಅಧ್ಯಕ್ಷರು ಎಂದು ಪಾಟೀಲ್ ಗಮನಕ್ಕೆ ತಂದಾಗ ಮತ್ತೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಅರೋಪಿಸಿ ಗ್ರಾ.ಪಂ ಅಧ್ಯಕ್ಷ ನಾಗರಾಜು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನಲೆಯಲ್ಲಿ ಶಾಸಕ ಕೆ.ಎಸ್ ಲಿಂಗೇಶ್ , ಮಾಜಿ ಸಚಿವ ಬಿ.ಶಿವರಾಂ, ವೈ ಎನ್ ಕೃಷ್ಣೇಗೌಡ , ಎಂ ಅರ್ ವೆಂಕಟೇಶ್ ಸೇರಿದಂತೆ ಪಕ್ಷಾತೀತವಾಗಿ ಮುಖಂಡರು ಹಾಗೂ ಕಾರ್ಯಕರ್ತರು ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು.