ಬಾಗಲಕೋಟೆ, ಮಾ. 18 : ಬಾಗಲಕೋಟೆಯ ಕೆರೂರಿನಲ್ಲಿ ನಿನ್ನೆ ಭೀಕರ ಲಾರಿ ಅಪಘಾತ ಸಂಭವಿಸಿತ್ತು. ಮದ್ಯಸೇವನೆ ಮಾಡಿ ಚಾಲಕ ಲಾರಿ ಓಡಿಸಿದ್ದರಿಂದ ಅಪಾಘತ ಸಂಭವಿಸಿ, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಪಘಾತದ ಬಳಿಕ ಪರಾರಿಯಾಗಿದ್ದ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಅನೀಲ್ ಕುಮಾರ್ ಕಟಾಪೂರ ಎಂಬ ವ್ಯಕ್ತಿಯೇ ಅಪಘಾತ ಮಾಡಿದ ಲಾರಿ ಚಾಲಕ. ಬಂಧಿತ ಚಾಲಕ ಕೊಪ್ಪಳ ಜಿಲ್ಲೆ ಹುಲಗೇರಿ ಗ್ರಾಮದವನು. ಕೆರೂರು ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಅಂಗಡಿಗೆ ಲಾರಿ ನುಗ್ಗಿತ್ತು. ಚಾಲಕನ ಅಜಾಗರೂಕತೆಯಿಂದ ಅಂಗಡಿಗೆ ನುಗ್ಗಿದ ಲಾರಿ ಮೂವರನ್ನು ಬಲಿ ಪಡೆದಿತ್ತು. ಹುಬ್ಬಳ್ಳಿಯಿಂದ ಬಾಗಲಕೋಟೆ ಕಡೆಗೆ ಹೊರಟಿದ್ದ ಲಾರಿ ಕೆರೂರಿನಲ್ಲಿ ಹೆದ್ದಾರಿ ಪಕ್ಕದ ಅಂಗಡಿಗೆ ಲಾರಿ ನುಗ್ಗಿದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದರು. ಇನ್ನೂ ಮೂವರಿಗೆ ಗಾಯಗಳಾಗಿದ್ದವು. ಬಾಗಲಕೋಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರ ಸ್ಥಿತಿ ಗಂಭೀರವಾಗಿದೆ. ಲಕ್ಷ್ಮಣಸಾ ವಿಠ್ಠಲಸಾ ಹಾದಿಮನಿ, ಮಹಾನಂದ ಈರಣ್ಣ ಕರಿ, ಪೂಜಾ ಅರ್ಜುನ ಸಾವನ್ನಪ್ಪಿದ್ದರು.