ಬೆಂಗಳೂರು: “ಎಣ್ಣೆ ಬೇಕು ಅಣ್ಣಾ” ಎಂದು ಬಾಯಿ ಬಡಕೊಳ್ಳುತ್ತಿದ್ದವರಿಗೆಲ್ಲಾ ಸರ್ಕಾರ ಎಣ್ಣೆ ಸಿಗುತ್ತೆ ಎಂದಿದ್ದೇ ತಡ ಹನುಮಂತನ ಬಾಲದ ರೀತಿ ಜನ ಎಣ್ಣೆ ಅಂಗಡಿ ಮುಂದೆ ಕಾದು ಕುಳಿತಿದ್ದಾರೆ.
ಹೆಚ್.ಎಸ್.ಆರ್. ಲೇಔಟ್ನ ಡ್ರಾಪ್ಸ್, ಎಂ.ಆರ್.ಪಿ ಮಧ್ಯದಂಗಡಿ, ವೈನ್ ಶಾಪ್ಗಳ ಮುಂಭಾಗ ಬೆಳಿಗ್ಗೆ 4 ರಿಂದಲೇ ಜನ ಸಾಮಾಜಿಕ ಅಂತರ ಕಾಯ್ದುಕೊಂಡು ಎಣ್ಣೆಗಾಗಿ ಕಾಯುತ್ತಿದ್ದ ದೃಶ್ಯ ಕಂಡು ಬಂದಿತು.
ಹೆಣ್ಣು – ಗಂಡು ಎಂಬ ಭೇದವಿಲ್ಲದೆ ಸರ್ವರೂ ಸಮಾನರೆಂಬಂತೆ ಎಣ್ಣೆಗಾಗಿ ಹಾತೊರೆಯುತ್ತಾ ಎಣ್ಣೆ ಅಂಗಡಿಗೆ ಹೋಗುತ್ತಿದ್ದಾರೆ. ಈ ವೇಳೆ ಅಬಕಾರಿ ಅಧಿಕಾರಿಗಳು ಶಾಪ್ಗಳ ಒಳ ಹೋಗುವ ಮುನ್ನ ಕೊರೋನಾ ತಪಾಸಣೆ ನಡೆಸಿ, ಸ್ಯಾನಿಟೈಸರ್ ಸಿಂಪಡಿಸಿ ಒಳ ಬಿಡುತ್ತಿದ್ದರು.
ಒಬ್ಬರಿಗೆ ಕೇವಲ 3 ಲೀ. ಎಣ್ಣೆಗೆ ಮಾತ್ರ ಅವಕಾಶ ಲಭ್ಯವಿತ್ತು. ಇಂದು ಒಂದೇ ದಿನ ಸರ್ಕಾರದ ಬೊಕ್ಕಸಕ್ಕೆ ಹಣದ ಹರಿವು ಹೆಚ್ಚಾಗಲಿದೆ ಎಂದು ಅಬಕಾರಿ ಅಧಿಕಾರಿಗಳು ಅಭಿಪ್ರಾಯಪಟ್ಟರು.