ಕಾಂಗ್ರೆಸ್ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತದೆ: ಬಿವೈವಿ

ಕಾಂಗ್ರೆಸ್ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತದೆ: ಬಿವೈವಿ

ಬೆಂಗಳೂರು: ಜನಸಾಮಾನ್ಯರಿಗೆ ಗ್ಯಾರಂಟಿ ಯೋಜನೆಗಳ ಬೊಕ್ಕಸ ಬರವಸೆಯನ್ನು ನೀಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ತಮ್ಮ ಆಡಳಿತದ ವೈಫಲ್ಯವನ್ನು ಮುಚ್ಚಿಕೊಳ್ಳಲು ತೆರಿಗೆ ಬಾಕಿ ನೆಪ ಮಾಡಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಹೊರಟಿದೆ ಎಂದು ಬಿಜೆಪಿಯ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.

ಇನ್ನು ಈ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಸುಳ್ಳು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸುವುದೂ ಕೂಡ ವಂಚನೆಯ ಇನ್ನೊಂದು ಮುಖ. ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಲಿದೆ, ಕಾಂಗ್ರೆಸ್ ಸರ್ಕಾರದ ಬಂಡವಾಳ ಸಾಕ್ಷಿ ಸಮೇತ ಬಯಲಿಗೆಳೆಯಲಿದೆ.

ಸುಮಾರು 60 ವರ್ಷಗಳ ಕಾಲ ಈ ದೇಶವನ್ನಾಳಿದ ಕಾಂಗ್ರೆಸ್ ‘ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ’ ಎನ್ನುವಂತೆ ನಿರಂತರವಾಗಿ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸಿ ರಾಜ್ಯಕ್ಕೆ ಬಹುದೊಡ್ಡ ಅನ್ಯಾಯಗಳನ್ನು ಎಸಗಿರುವುದಕ್ಕೆ ಇತಿಹಾಸದ ಪುಟಗಳಲ್ಲಿ ದಾಖಲೆ ಇದೆ, ಇದನ್ನೆಲ್ಲ ಇಷ್ಟರಲ್ಲೇ ಪುಂಖಾನುಪುಂಖವಾಗಿ ನಾವೂ ಬಿಚ್ಚಿಟ್ಟು ಕಾಂಗ್ರೆಸ್ ನ ಅಸಲೀ ಮುಖವಾಡ ಕನ್ನಡಿಗರ ಮುಂದೆ ಕಳಚಿಡಲಿದ್ದೇವೆ.

‘ಸ್ವಾವಲಂಬಿ ಬಲಿಷ್ಠ ಭಾರತ ನಿರ್ಮಾಣ’ದ ಮಹಾ ಸಂಕಲ್ಪ ತೊಟ್ಟಿರುವ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಕರ್ನಾಟಕವೇ ಸ್ಫೂರ್ತಿ. ಅಣ್ಣ ಬಸವಣ್ಣ ನವರ ಕಾಯಕ ತತ್ವವೇ ಪ್ರೇರಣೆ. ಇದಕ್ಕೆ ‘ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ’ ಸಾಕ್ಷಿ ಸಂಕೇತವಾಗಿದೆ.

ಸಮೃದ್ಧ ಕರ್ನಾಟಕ ಮೋದಿ ಜೀ ಅವರ ಆದ್ಯತೆಯಾಗಿರುವಾಗ ‘ಆರ್ಥಿಕ ತಾರತಮ್ಯದ ಸುಳ್ಳು ಕಂತೆ ಹೊತ್ತು ‘ಚಲೋ ದಿಲ್ಲಿ’ ಬದಲು ಬರಗಾಲದಿಂದ ತತ್ತರಿಸಿರುವ ರೈತರ ಕಣ್ಣೀರೊರೆಸಿ ಪರಿಹಾರ ನೀಡಲು ‘ಚಲೋ ಹಳ್ಳಿ’ ಕಾರ್ಯಕ್ರಮ ಆರಂಭಿಸಿ ನಿಮ್ಮೊಂದಿಗೆ ನಾವೂ ಬರುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

Related