ಧಾರವಾಡ, ಫೆ. 17: ಕೆಸಿಡಿ ಸರ್ಕಲ್ ಬಳಿಯ ಪಿಡಿಬ್ಲ್ಯೂಡಿ ಕ್ವಾರ್ಟರ್ಸ್ನಲ್ಲಿ ಪರವಾನಗಿ ಇಲ್ಲದೇ 50 ವರ್ಷಗಳಷ್ಟು ಹಳೆಯದಾದ ಹುಣಸೆ ಮರವೊಂದನ್ನು ಅಧಿಕಾರಿಗಳು ಕಡಿದು ಹಾಕಿದ್ದಾರೆ. ಪಿಡಿಬ್ಲ್ಯೂಡಿ ಅಧಿಕಾರಿಯೊಬ್ಬರು ತಮ್ಮ ಮನೆ ಸೌಂದರ್ಯೀಕರಣಕ್ಕಾಗಿ ಇಲ್ಲಿನ ಎರಡು ಮರಗಳನ್ನು ಕಡಿಯಲು ಯೋಜಿಸಿದ್ದರು. ಒಂದು ಮರವನ್ನು ಈಗಾಗಲೇ ಕಡಿದು ಹಾಕಿದ್ದು, ಇನ್ನೊಂದು ಮರಕ್ಕೂ ಈಗಾಗಲೇ ಕೊಡಲಿಯಿಂದ ಕತ್ತರಿಸುವ ಮಾರ್ಗಸೂಚಿ ಹಾಕಿದ್ದಾರೆ.
ಧಾರವಾಡದ ಹೃದಯ ಭಾಗದಲ್ಲಿ 50-100 ವರ್ಷಗಳಷ್ಟು ಹಳೆಯದಾದ ಕೆಲವೇ ಕೆಲವು ಮರಗಳು ಇವೆ. ಈ ಪೈಕಿ ಹುಣಸಿ ಮರಗಳು ಕೆಲವು ಮಾತ್ರ. ಈಗಾಗಲೇ ಬೇರೆ ಬೇರೆ ಕಾರಣಗಳಿಗಾಗಿ ಈ ಭಾಗದಲ್ಲಿ ನೂರಕ್ಕೂ ಹೆಚ್ಚು ಗಿಡಮರಗಳನ್ನು ಕಡಿದು ಹಾಕಲಾಗಿದೆ. ಅಳಿದುಳಿದ ಗಿಡಮರಗಳನ್ನು ಸರ್ಕಾರಿ ಅಧಿಕಾರಿಗಳೇ ಕಡಿದು ಹಾಕಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಕೆಸಿಡಿ ವೃತ್ತದಲ್ಲಿ ವಾಹನ ಕಂಪನಿಯೊಂದು ಸಣ್ಣ ಗಿಡವನ್ನು ಕಡಿದು ಹಾಕಿದಾಗ ಪರಿಸರ ಹೋರಾಟಗಾರರು ತೀವ್ರ ಹೋರಾಟ ನಡೆಸಿ ಕಂಪನಿಯಿಂದ ದಂಡ ಹಾಕಿಸಲಾಗಿತ್ತು. ಇದೀಗ ಸರ್ಕಾರಿ ಅಧಿಕಾರಿಗಳೇ ಸರ್ಕಾರದ ಜಾಗದಲ್ಲಿನ ದೈತ್ಯ ಮರವೊಂದನ್ನು ಕಡಿದು ಹಾಕಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.