ಪಿಜಿ ಸೆಂಟರ್ನಲ್ಲಿ ಮೂಲ ಸೌಕರ್ಯಗಳ ಕೊರತೆ

ಪಿಜಿ ಸೆಂಟರ್ನಲ್ಲಿ ಮೂಲ ಸೌಕರ್ಯಗಳ ಕೊರತೆ

ಕೊಪ್ಪಳ : ಜಿಲ್ಲೆಯ ಈ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಕೊಪ್ಪಳ ನಗರದಲ್ಲಿ ಆರಂಭವಾಗಿರುವ ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಅಜ್ಞಾತವಾಗಿ ಉಳಿದುಕೊಂಡಿದೆ.

ಸ್ನಾತಕೋತ್ತರ ಕೇಂದ್ರದ ಮಾರ್ಗಸೂಚಿಸುವ ಒಂದೇ ಒಂದು ನಾಮಫಲಕವಿಲ್ಲದೆ ಇರುವುದರಿಂದ ಸ್ನಾತಕೋತ್ತರ ಕೇಂದ್ರಕ್ಕೆ ಬಂದು ತಲುಪುವುದಕ್ಕೆ ವಿದ್ಯಾರ್ಥಿಗಳು ಹರಸಾಹಸಪಡಬೇಕಾಗಿದೆ. ಈಗ ಸ್ನಾತಕೋತ್ತರ ಪದವಿ ಪ್ರವೇಶಕ್ಕಾಗಿ ವಿದ್ಯಾರ್ಥಿಗಳ ದಾಖಲಾತಿಗಳ ಪರಿಶೀಲನೆ ನಡೆಯುತ್ತಿದ್ದು, ಸರಿಯಾದ ಮೂಲಭೂತ ಸೌಕರ್ಯಗಳು ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಹೀಗಾಗಿ ಈ ಸ್ನಾತಕೋತ್ತರ ಕೇಂದ್ರ ಹುಡುಕಿಕೊಂಡು ಬರಬೇಕಾದರೆ ವಿದ್ಯಾರ್ಥಿಗಳಿಗೆ ಸಾಕಬೇಕಾಗುತ್ತದೆ. ಈಗ ಸ್ನಾತಕೋತ್ತರ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ಆರಂಭವಾಗಿದೆ.

ಹಳೆ ಜಿಲ್ಲಾಸ್ಪತ್ರೆ ಕಟ್ಟಡದಲ್ಲಿ ಈ ಪಿಜಿ ಸೆಂಟರ್ ಜೊತೆಗೆ ಆರೋಗ್ಯ ಇಲಾಖೆಯ ಕೆಲ ಕಚೇರಿಗಳು ಇವೆ. ಕಚೇರಿಗಳ ಮುಂದಿನ ಒಂದಿಷ್ಟು ಜಾಗ ಸ್ವಚ್ಛವಾಗಿರವುದು ಬಿಟ್ಟರೆ ಉಳಿದ ಎಲ್ಲ ಜಾಗವು ಗಬ್ಬೆದ್ದು ನಾರುತ್ತಿದೆ. ಅದರಲ್ಲೂ ಪಿಜಿ ಸೆಂಟರ್ ಮುಂದಿರುವ ಜಾಗವಂತೂ ಕೊಳಚೆ ಪ್ರದೇಶಕ್ಕಿಂತಲೂ ಕಡೆಯಾಗಿದೆ.

ನೂರಾರು ವಿದ್ಯಾರ್ಥಿಗಳು ಈಗ ಈ ಪಿಜಿ ಸೆಂಟರ್‌ಗೆ ದಾಖಲಾತಿಗಳ ಪರಿಶೀಲನೆಗೆ ಬರುತ್ತಿದ್ದಾರೆ. ಬಂದಿರುವ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಸರಿಯಾದ ಸ್ಥಳ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದವರು ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದರು.

Related