ಬೆಂಗಳೂರು: ಸರ್ಕಾರದ ಪ್ರತಿನಿಧಿ ಲಿಖಿತ ರೂಪದ ಆದೇಶ ಪ್ರತಿ ನೀಡುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಕೆಎಸ್ಆರ್ಟಿಸಿ ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರು ಅವರು ಹೇಳಿದರು.
ಫ್ರೀಡಂಪಾರ್ಕ್ನಲ್ಲಿ ಸರ್ಕಾರಿ ನೌಕರರು ನಡೆಸುತ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸಚಿವರು ಬರುವವರೆಗೂ ಮುಷ್ಕರ ಮುಂದುವರೆಯಲಿದೆ ಎಂದು ತಿಳಿಸಿದರು.
ಸರ್ಕಾರ ಹೇಳಿರುವ 9 ಅಂಶಗಳ ಭರವಸೆಗಳ ಬಗ್ಗೆ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಬಂದು ಲಿಖಿತ ರೂಪದ ಆದೇಶ ಕೊಡಬೇಕು ಎಂದು ಪಟ್ಟು ಹಿಡಿದರು.
ನಾವು ನಮ್ಮ ನಿಲುವಿನಿಂದ ಹಿಂದೆ ಸರಿಯುವುದಿಲ್ಲ. ಅಡ್ಡಗೋಡೆ ಮೇಲೆ ದೀಪ ಇಡುವ ರೀತಿಯಲ್ಲಿ ಸರ್ಕಾರ ಮಾತನಾಡಬಾರದು. ಈ ವಿಚಾರದಲ್ಲಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ನಾವು ಹೇಳಿದಂತೆ ನಡೆಯುತ್ತೇವೆ
ನಮ್ಮ ಮಾತಿಗೆ ನಾವು ಬದ್ಧರಿದ್ದೇವೆ. ಖಂಡಿತವಾಗಿಯೂ ನಾವು ಹೇಳಿದ 9 ಬೇಡಿಕೆ ಈಡೇರಿಸುತ್ತೇನೆ. ದಯವಿಟ್ಟು ನಿಮ್ಮ ಮುಷ್ಕರ ಕೈಬಿಟ್ಟು ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕೆಂದು ಕಂದಾಯ ಸಚಿವ ಆರ್. ಅಶೋಕ ಮನವಿ ಮಾಡಿದರು.