ಕೂಲಿಗೆ ಬಾಯ್‌ ಹೇಳಿ ಚುನಾವಣೆ ಪ್ರಚಾರಕ್ಕೆ ಜೈ ಜೈ!

ಕೂಲಿಗೆ ಬಾಯ್‌ ಹೇಳಿ ಚುನಾವಣೆ ಪ್ರಚಾರಕ್ಕೆ ಜೈ ಜೈ!

ರಾಜ್ಯದಲ್ಲಿ ಚುನಾವಣೆಯ ಪ್ರಚಾರಕ್ಕೆ ರಾಷ್ಟ್ರ ನಾಯಕರಿಂದ ಹಿಡಿದು ಸಿನಿ ಸ್ಟಾರ್ಗಳ ಪ್ರಚಾರ ಜೋರಾಗಿದೆ. ಇನ್ನು ಕೆಲವು ಕಡೆ ಚುನಾವಣೆ ಪ್ರಚಾರಕ್ಕೆಂದು ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದಾರೆ.

ಹೌದು, ಚುನಾವಣೆ ಕಾವು ಏರುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಕೆಸರೆರೆಚಾಟವೂ ಜೋರಾಗಿ ನಡೆಯುತ್ತಿದೆ. ಆದರೆ ಈ ಚುನಾವಣಾ ಸಮಯದಲ್ಲಿ ಕೂಲಿ ಕಾರ್ಮಿಕರ ಅಭಾವ ಹಳ್ಳಿಗಳಲ್ಲಿ ಕಾಡಲಾರಂಭಿಸಿದೆ. ಇದಕ್ಕೆ ಕಾರಣ ಚುನಾವಣಾ ಪ್ರಚಾರಕ್ಕಾಗಿ ಹಳ್ಳಿಗಳಲ್ಲಿ ಕೂಲಿ ಕೆಲಸಗಾರರನ್ನು ಪಕ್ಷಗಳು ಟಾರ್ಗೆಟ್‌ ಮಾಡಿದ್ದು, ಅವರನ್ನು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಬೂತ್‌ ಮಟ್ಟದಲ್ಲಿ ಪ್ರಚಾರಕ್ಕಾಗಿ ದಿನವೊಂದಕ್ಕೆ ರಾಜಕೀಯ ಪಕ್ಷಗಳು ಉಚಿತ ಊಟ, ತಿಂಡಿಯೊಂದಿಗೆ ತಲಾ 700ರಿಂದ 1 ಸಾವಿರ ರುಪಾಯಿ ವರೆಗೆ ನೀಡುತ್ತಿರುವುದರಿಂದ ಕೂಲಿ ಕಾರ್ಮಿಕರು ಕೂಲಿಗೆ ಬಾಯ್‌ ಹೇಳಿ ಚುನಾವಣೆ ಪ್ರಚಾರಕ್ಕೆ ಜೈ ಎನ್ನುತ್ತಿದ್ದಾರೆ.

ಮತದಾನಕ್ಕೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇರುವುದರಿಂದ ಎಲ್ಲ ಪಕ್ಷಗಳಲ್ಲೂ ಚುನಾವಣೆ ಪ್ರಚಾರ ಕಾರ್ಯ ಜೋರಾಗಿದೆ. ಕೆಲವು ಕೂಲಿ ಕಾರ್ಮಿಕರು ಹೆಚ್ಚು ಹಣ ನೀಡುವಂತೆ ರಾಜಕೀಯ ಪಕ್ಷದ ಅಭ್ಯರ್ಥಿಗಳಿಗೆ ದುಂಬಾ ಬಿದ್ದಿದ್ದಾರೆ. ಕೆಲವರಂತು ಇಂದು ಒಂದು ಪಕ್ಷದ ಪರ ಪ್ರಚಾರ ಮಾಡಿದರೆ, ನಾಳೆ ಇನ್ನೊಂದು ಪಕ್ಷದ ಪರ ಪ್ರಚಾರ ಮಾಡುತ್ತಿರುತ್ತಾರೆ. ಇದಕ್ಕೆ ಕಾರಣ ಯಾರು ಹೆಚ್ಚು ದುಡ್ಡು ಕೊಡುತ್ತಾರೋ ಅವರ ಪಕ್ಷದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ಅಭ್ಯರ್ಥಿಗಳ ಪರವಾಗಿ ಪ್ರಚಾರ ಸಭೆಗಳಲ್ಲಿ ಜೈಕಾರ ಹಾಕಲು ಹಳ್ಳಿಯ ಕಾರ್ಮಿಕರನ್ನು ಕರೆತರಲಾಗುತ್ತಿದೆ. ಪ್ರಚಾರ ಕಾರ್ಯದಲ್ಲಿ ಕೂಡ ಅವರೇ ಭಾಗಿಯಾಗುತ್ತಿದ್ದಾರೆ. ಹಣದ ಜೊತೆ ಚಾ ತಿಂಡಿ ಬಾಡೂಟ ಎಣ್ಣೆ ಎಲ್ಲವೂ ಫ್ರೀ ಸಿಗುವುದರಿಂದ ಶ್ರಮವಹಿಸಿ ದುಡಿಯುವುದಕ್ಕಿಂತ ಯಾವ ಪಕ್ಷ ಹೆಚ್ಚು ದುಡ್ಡು ಕೊಡುವುದೋ ಅದಕ್ಕೆ ಸೈ ಎನ್ನೋಣ ಎನ್ನುತ್ತಿದ್ದಾರೆ ಕಾರ್ಮಿಕರು.

ಇನ್ನು ನಗರ ಪ್ರದೇಶಗಳಲ್ಲಿ ಕೊಳಗೇರಿ ಪ್ರದೇಶದಲ್ಲಿ ಇರುವಂತಹ ಜನರಿಗೆ ಪ್ರಚಾರಕ್ಕೆಂದು ಪಕ್ಷಗಳು ಹಣಕೊಟ್ಟು ಅವರನ್ನು ಕರೆಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬರುತ್ತಿದೆ.

Related