ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಳೆದ ಬಾರಿ ಅವೆಲ್ಲ ಹಗರಣಗಳನ್ನು ಮಾಡಿದೆ ಎಂಬುದನ್ನು ತನಿಖೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿನ ಹಗರಣವನ್ನು ಯಾವ ತಂಡಗಳಿಗೆ ತನಿಖೆಗೆ ವಹಿಸಬೇಕು ಎಂಬ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ. ಬೇರೆ ಬೇರೆ ರೀತಿಯ ಹಗರಣಗಳಿರುವುದರಿಂದ ತನಿಖೆಗಳನ್ನೂ ಬೇರೆ ಬೇರೆ ರೀತಿ ನಡೆಸಬೇಕಾಗುತ್ತದೆ ಎಂದರು.
ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸೈಬರ್ ಪರಿಣಿತರ ತಂಡ ಬೇಕು. ಕೆಲವು ಕಡೆ ಎಸ್ಐಟಿ ತನಿಖೆ ಮಾಡುತ್ತದೆ. ಕೆಲವು ಇಲಾಖಾವಾರು ತನಿಖೆ ಮಾಡಬೇಕಾಗುತ್ತದೆ. ಮತ್ತೆ ಕೆಲವೊಂದು ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕಾಗುತ್ತದೆ. ಯಾವ ಯಾವ ಹಗರಣ ಯಾವ ರೀತಿಯಲ್ಲಾಗಿದೆ ಎಂಬುದರ ಮೇಲೆ ತನಿಖೆ ನಿರ್ಧಾರವಾಗುತ್ತದೆ ಎಂದರು.