ಸಚಿವರಿಂದ ಹರಗಿನಡೋಣಿ ಕುಡಿಯುವ ನೀರಿನ ಯೋಜನೆಗೆ ಚಾಲನೆ

ಸಚಿವರಿಂದ ಹರಗಿನಡೋಣಿ ಕುಡಿಯುವ ನೀರಿನ ಯೋಜನೆಗೆ ಚಾಲನೆ

ಬಳ್ಳಾರಿ: ಹರಗಿನಡೋಣಿ ಗ್ರಾಮದಲ್ಲಿ ಶಾಸಕರ ನಿಧಿಯಿಂದ 30 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕುಡಿಯುವ ನೀರಿನ ಯೋಜನೆಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಕ್ರೀಡೆ ಸಚಿವರು ಹಾಗೂ ಜಿಲ್ಲಾ ಉಸ್ತುವರಿ ಸಚಿವರಾದ ಬಿ.ನಾಗೇಂದ್ರ ಅವರು ಚಾಲನೆ ನೀಡಿದರು.
ಹಲವು ದಶಕಗಳ ಬೇಡಿಕೆಯಾಗಿದ್ದ ಈ ಕುಡಿಯುವ ನೀರಿನ ಯೋಜನೆಗೆ ಚಾಲನೆ ದೊರೆತಿರುವುದರಿಂದ ಗ್ರಾಮಸ್ಥರಲ್ಲಿ ಸಂಭ್ರಮ ಮನೆಮಾಡಿದ್ದು ಕಂಡುಬಂತು. ಪೈಪ್‍ಲೈನ್ ಮೂಲಕ ಗ್ರಾಮಕ್ಕೆ ಬಂದ ನೀರಿನಲ್ಲಿ ಚಿಣ್ಣರು ಮಿಂದೆಂದ್ದು ಕುಣಿದು ಕುಪ್ಪಳಿಸಿದ ದೃಶ್ಯ ಮುದ ನೀಡುವಂತಿತ್ತು.

ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಶಾಸಕರ ಅನುದಾನದ ಅಡಿಯಲ್ಲಿ ಹರಗಿನ ಡೋಣಿ ಗಾಮಕ್ಕೆ ಅಲ್ಲಿಪುರ ಕೆರೆಯಿಂದ ಸುಮಾರು ಒಂಬತ್ತು ಕಿಲೋಮೀಟರ್ ಉದ್ದದ ಪೈಪ್ ಲೈನ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗಿದೆ. ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಚಾಲನೆ ನೀಡಿರುವುದು ನನಗೆ ಸಂತಸ ತಂದಿದೆ ಎಂದರು.

ಈ ಅತ್ಯಗತ್ಯ ಯೋಜನೆಯ ಈಡೇರಿಕೆಗೆ ಆಗ್ರಹಿಸಿ ಹರಗಿನಡೋಣಿ ಗ್ರಾಮಸ್ಥರು ಹಲವು ಬಾರಿ ಚುನಾವಣೆಗಳನ್ನು ಬಹಿಷ್ಕರಿಸುವ ಮೂಲಕ ಪ್ರತಿಭಟನೆ ನಡೆಸಿದ್ದನ್ನು ಸ್ಮರಿಸಿದ ಸಚಿವ ನಾಗೇಂದ್ರ ಅವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆ ಸಂದರ್ಭದಲ್ಲಿ ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸುವ ಕುರಿತು ಭರವಸೆ ನೀಡಿದ್ದರು. ಅದರಂತೇ ಈಗ ಈ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿದೆ. ಹಾಗೇಯೇ ಈ ಹಿಂದೆ ಯೋಜನೆ ಸಿದ್ದಪಡಿಸಿದಂತೆ ಸುಮಾರು 25ಕೋಟಿ ವೆಚ್ಚದಲ್ಲಿ ಗ್ರಾಮಕ್ಕೆ ಹೊಂದಿಕೊಂಡಂತೆ ಕುಡಿಯುವ ನೀರಿನ ಕೆರೆ ನಿರ್ಮಾಣ ಮಾಡುವ ಮೂಲಕ ದಶಗಳಿಂದ ಹರಗಿನಡೋಡಿ ಗ್ರಾಮ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಮುಂಬರುವ ವರ್ಷದೊಳಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.

Related