ಗಜೇಂದ್ರಗಡ :ನೈತಿಕತೆ ಇರುವವರೆಗೆ ಪತ್ರಿಕಾ ರಂಗದ ಬಲ ಕುಗ್ಗುವುದಿಲ್ಲ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವೇ ಪತ್ರಿಕಾ ಮಾಧ್ಯಮವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ಬಲಿಷ್ಠವಾದ ಅಂಗ ಎಂದು ರೋಣ ಹಾಗೂ ಗಜೇಂದ್ರಗಡ ತಾಲ್ಲೂಕಿನ ಕಸಾಪ ಅಧ್ಯಕ್ಷ ಈಶ್ವರಪ್ಪ ರೇವಡಿ ಹೇಳಿದರು.
ಪಟ್ಟಣದ ಮೈಸೂರು ಮಠದಲ್ಲಿ ಉತ್ತರ ಕರ್ನಾಟಕ ಪತ್ರಕರ್ತರ ಸಂಘ ಹಾಗೂ ಪತ್ರಿಕಾ ವಿತರಕರು ಆಯೋಜಿಸಿದ ಪತ್ರಿಕಾ ದಿನಾಚರಣೆಯಲ್ಲಿ ಪತ್ರಿಕೆ ವಿತರಣೆ ಮಾಡುವವರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿ ಮಾತನಾಡಿದರು.
ಕತ್ತಿಗಿಂತ ಲೇಖನಿ ಹರಿತ ಎಂಬ ಮಾತಿನಂತೆ ಪತ್ರಿಕೆಗಳು ಸುದ್ದಿಗಾಗಿಯಷ್ಟೆ ಅಲ್ಲ, ತಮ್ಮ ಲೇಖನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸರಿದಾರಿಗೆ ತರುವ ಕೆಲಸ ಮಾಡಬೇಕು. ನಮ್ಮನ್ನು ಸರಿಪಡಿಸುವ ಮಾಧ್ಯಮವಾಗಿ ಕೆಲಸ ಮಾಡಬೇಕಿದೆ. ಜನರಲ್ಲಿ ಜಾಗೃತಿ ಮೂಡಿಸಬೇಕು. ಸ್ವಚ್ಛ ಮನಸ್ಸನ್ನು ಪತ್ರಿಕಾರಂಗದಲ್ಲಿ ಬೆಳೆಸಬೇಕು. ಸಮಾಜವನ್ನು ಸುಶಿಕ್ಷಿತವನ್ನಾಗಿ ಮಾಡುವುದು ಹಾಗೂ ಮಕ್ಕಳಲ್ಲಿ ಸಕಾರಾತ್ಮಕ ಭಾವನೆ ಮೂಡಿಸುವುದೂ ಪತ್ರಿಕೆಯ ಕರ್ತವ್ಯವಾಗಬೇಕು ಹಾಗೂ ಮುಂಜಾನೆ ಚಳಿ, ಮಳೆ, ಗಾಳಿ ಎನ್ನದೇ ವಿತರಕರು ತಮ್ಮ ಆರೋಗ್ಯದ ಹಂಗನ್ನು ತೊರೆದು ಪತ್ರಿಕೆ ಮುಟ್ಟಿಸುವ ಕಾರ್ಯ ಮಾಡಲಿದ್ದಾರೆ. ಇಂತಹ ಕೊರೋನಾ ಸಮಯದಲ್ಲಿ ಅವರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿದ್ದು ಅವರ ಆರೋಗ್ಯದ ದೃಷ್ಟಿಯಿಂದ ಉತ್ತಮವಾದ ಕಾರ್ಯ ಮಾಡಿದ್ದಾರೆ ಹಾಗೂ ವಿತರಕರೂ ಕೊರೋನಾ ಸಮಯದಲ್ಲಿ ಆರೋಗ್ಯದ ಕಡೆ ತುಂಬಾ ನಿಗಾವಹಿಸಿಬೇಕು ಎಂದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಸೀತಲ ಓಲೇಕಾರ ವಹಿಸಿದ್ದರು. ಅತಿಥಿಗಳಾಗಿ ವಿರೇಶ ಪಾಟೀಲ, ಗಣೇಶ ದಿವಾಣದ, ಕೃಷ್ಣಾ ರಾಠೋಡ, ಮಾತನಾಡಿದರು.
ಈ ವೇಳೆ ಮುತ್ತಣ್ಣ ಚವ್ಹಾಣ, ಜಯದೇವ ಗಂಜಿಹಾಳ, ಚನ್ನು ಸಮಗಂಡಿ, ಸಿದ್ದಪ್ಪ ಚುರ್ಚಿಹಾಳ , ವಜೀರಸಾಬ ನಧಾಪ, ಮಹಾಂತಯ್ಯ ಕಂಪ್ಲಿಮಠ, ಮಲ್ಲಿಕಾರ್ಜುನ ಹಡಪದ, ಶ್ರೀಧರ ದಿವಾಣದ, ಮುತ್ತಣ್ಣ ಮ್ಯಾಗೇರಿ,ಕಿರಣ ನಿಡಗುಂದಿ, ಪ್ರತಾಪ ರಾಠೋಡ, ಶಂಕರ ರಾಠೋಡ, ಮಿರಜ ಮಾಗಿ,ರವಿ ಹಾದಿಮನಿ ಸೇರಿದಂತೆ ಪತ್ರಿಕಾ ವಿತರಕರು ಇದ್ದರು.