ಕೆ.ಆರ್.ಪುರಂ : ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸಕ್ಕೆ ವಜಾಗೊಳಿಸಿದ ಕಂಪನಿಗೆ ನೂರಾರು ಗಾರ್ಮೆಂಟ್ಸ್ ನೌಕರರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಭಟ್ಟರಹಳ್ಳಿ ಸಮೀಪದ ಅರವಿಂದ್ ಗಾರ್ಮೆಂಟ್ಸ್ ಸಂಸ್ಥೆ ಕೊರೋನಾ ನೆಪವೊಡ್ಡಿ ಬಲವಂತವಾಗಿ ರಾಜೀನಾಮೆ ಪಡೆದು ಕೆಲಸದಿಂದ ತೆಗೆದು ಹಾಕುತ್ತಿರುವ ಕಂಪನಿ ಅಡಳಿತ ಮಂಡಳಿ ಕ್ರಮ ಖಂಡಿಸಿ ನೂರಾರು ಮಹಿಳಾ ನೌಕರರು ಕಂಪನಿ ಮುಂದೆ ಪ್ರತಿಭಟನೆ ನಡೆಸಿ ಏಕಾಏಕಿ ಕೆಲಸದಿಂದ ತೆಗೆದು ಬೀದಿಗೆ ತಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ಯಾಕ್ಟರಿಯಲ್ಲಿ 750ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಲಾಕ್ ಡೌನ್ ಸಮಯದಲ್ಲಿ ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಂದ ಬರುವ ನೌಕರರು 350ಕ್ಕೂ ಕಾರ್ಮಿಕರಿಗೆ ಸಂಬಳವೂ ನೀಡದೆ ಬಲವಂತವಾಗಿ ರಾಜೀನಾಮೆ ಬರೆಸಿಕೊಂಡು ಮನೆಗೆ ಕಳಿಸುತ್ತಿದ್ದಾರೆ ಎಂದು ಕನ್ನಡ ರಣಧೀರ ಪಡೆ ರಾಜ್ಯ ಉಪಾಧ್ಯಕ್ಷ ಆನಂದಗೌಡ ಆರೋಪಿಸಿದರು.
ಆಡಳಿತ ಮಂಡಳಿ ರಾಜೀನಾಮೆ ಪತ್ರಕ್ಕೆ ಹೆಬ್ಬೆಟ್ಟು ಮುದ್ರೆ ಒತ್ತಿಸಿ ಕೆಲಸದಿಂದ ತೆಗೆಯುತ್ತಿದ್ದಾರೆ. ಕೇಂದ್ರ ಸರ್ಕಾರ ವೇತನ ಕಡಿತಗೊಳಿಸಬಾರದು ಎಂದು ಅದೇಶಿದೆ, ಅದೇಶಕ್ಕೆ ಕಿಮ್ಮತ್ತೂ ನೀಡದೆ, ಈವರೆಗೂ ಯಾವುದೇ ರೀತಿಯ ಸಂಬಳ ನೀಡದೆ ವಂಚಿಸಲಾಗಿದೆ. ಅರ್ಧ ಸಂಬಳ ಕೂಡ ನೀಡಿಲ್ಲ, ಫ್ಯಾಕ್ಟರಿಯಲ್ಲಿ 400ಕ್ಕೂ ಜನರು ಕೆಲಸ ಮಾಡುತ್ತಿದ್ದಾರೆ. ಸ್ಥಳೀಯರನ್ನು ತೆಗೆಯದೆ ಗ್ರಾಮಾಂತರ ಬರುವವರನ್ನು ಕೆಲಸ ತೆಗೆಯುತ್ತಿರುವ ಕ್ರಮ ಸರಿಯಲ್ಲ ಯಾವುದೇ ಕಾರಣಕ್ಕೂ ನಾವು ಕೆಲಸ ಬಿಡುವುದಿಲ್ಲ. ಜೊತೆಗೆ ಸಂಬಳವೂ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.