ಬೆಳಗಾವಿ: ಬೆಳಗಾವಿಯಲ್ಲಿ ಈ ವರ್ಷದ ಚಳಿಗಾಲದ ಅಧಿವೇಶನ ಪ್ರಾರಂಭವಾಗಿ ಇಂದಿಗೆ ನಾಲ್ಕು ದಿನ ತುಂಬುತ್ತಾ ಬಂದಿದೆ. ಇನ್ನು ಸದನದಲ್ಲಿ ವಿಪಕ್ಷ ನಾಯಕರುಗಳು ಮತ್ತು ಆಡಳಿತದ ನಾಯಕರುಗಳು ಸಮಸ್ಯೆಗಳ ಕುರಿತು ಚರ್ಚಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಸುವರ್ಣ ವಿಧಾನಸೌಧದಲ್ಲಿ ಅಳವಡಿಸಲಾಗಿರುವ ಸ್ವಾತಂತ್ರ್ಯ ಹೋರಾಟಗಾರ, ಹಿಂದುತ್ವವಾದಿ ವೀರ ಸಾವರ್ಕರ್ ಅವರ ಭಾವಚಿತ್ರ ತೆರವು ಮಾಡುವ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಗುರುವಾರ ತಿಳಿಸಿದರು. ಸಾವರ್ಕರ್ ಭಾವಚಿತ್ರ ತೆಗೆಯಬೇಕೇ ಎಂಬ ಬಗ್ಗೆ ಸ್ಪೀಕರ್ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು. ಸಾವರ್ಕರ್ ಭಾವಚಿತ್ರ ತೆರವುಗೊಳಿಸಬೇಕು ಎಂದು ಕಾಂಗ್ರೆಸ್ನ ಹಲವು ನಾಯಕರಿಂದ ಆಗ್ರಹ ವ್ಯಕ್ತವಾಗಿತ್ತು.
ಸದ್ಯಕ್ಕೆ ಅಂತಹ ಯಾವುದೇ ಪ್ರಸ್ತಾಪ ನಮಗೆ ಬಂದಿಲ್ಲ. ಬಂದರೆ ಆವಾಗ ನೋಡೋಣ, ಈಗಲೇ ಬ್ಯಾಟ್ ಬೀಸಿದ್ರೆ ಆಗುತ್ತಾ? ಸಂವಿಧಾನ ಬದ್ಧವಾಗಿ ಏನು ಮಾಡಬೇಕು ಅದನ್ನು ಮಾಡುತ್ತೇನೆ. ನನಗೆ ಸಚಿವರೂ ಒಂದೇ, ಪ್ರತಿಪಕ್ಷದವರೂ ಒಂದೇ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರವರ ಹೇಳಿಕೆ ನೀಡಲು ಎಲ್ಲರಿಗೂ ಅವಕಾಶವಿದೆ. ಯಾವುದೇ ವಿಚಾರವಿದ್ದರೂ ಸಂವಿಧಾನ ಬದ್ಧವಾಗಿ ಕರ್ತವ್ಯ ನಿರ್ವಹಿಸುವೆ ಎಂದು ಖಾದರ್ ಹೇಳಿದ್ದಾರೆ.