ಹಾವೇರಿ : ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಾಲೆಬಿಟ್ಟ ಬಾಲಕಿಯರು ಹಾಗೂ ಬಾಲ್ಯ ವಿವಾಹ ತಡೆದ ಪ್ರಕರಣದ ಕಿಶೋರಿಯರ ಮನೆಗಳಿಗೆ ನಿರಂತರ ಭೇಟಿ ನೀಡಿ ಅವರ ಕಲಿಕೆ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ “ಮಗಳನ್ನು ಉಳಿಸಿ ಮಗಳನ್ನು ಓದಿಸಿ” ಯೋಜನೆ ಹಾಗೂ “ಬಾಲ್ಯ ವಿವಾಹ ನಿಷೇಧ” ಜಿಲ್ಲಾ ಮಟ್ಟದ ಸಮನ್ವಯ ಸಮಿತಿಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಂಡು ಮಕ್ಕಳಿಗೆ 21 ವರ್ಷ ಹಾಗೂ ಹೆಣ್ಣು ಮಕ್ಕಳಿಗೆ 18 ವರ್ಷ ಪೂರ್ಣಗೊಳ್ಳುವ ಮೊದಲು ಮದುವೆ ಮಾಡದಂತೆ ಪಾಲಕರಿಗೆ ಮನವರಿಕೆ ಮಾಡಿಕೊಡಬೇಕು. ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. 2020-21ನೇ ಸಾಲಿನ ಕ್ರಿಯಾಯೋಜನೆಯನ್ವಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಆಯೋಜಿಸಿ “ಮಗಳನ್ನು ಉಳಿಸಿ ಮಗಳನ್ನು ಓದಿಸಿ” ಮತ್ತು “ಬಾಲ್ಯ ವಿವಾಹ ನಿಷೇಧ” ಮನೆ ಮನೆಯ ಘೋಷವಾಕ್ಯವಾಗುವಂತೆ ಶ್ರಮಿಸಲು ಸೂಚನೆ ನೀಡಿದರು.