ಕೊರೋನಾ 2 ನೇ ಅಲೆಗೆ ಜಿಲ್ಲೆ ತತ್ತರ!

ಕೊರೋನಾ 2 ನೇ ಅಲೆಗೆ ಜಿಲ್ಲೆ ತತ್ತರ!

ಕಲಬುರಗಿ : ಕೊರೋನಾ 2ನೇ ಅಲೆ ಶರವೇಗದಲ್ಲಿರುವ ಕಲಬುರಗಿಯಲ್ಲಿ ಇದನ್ನು ಕಟ್ಟಿ ಹಾಕುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ.

ತಪಾಸಣೆ, ಚಿಕಿತ್ಸೆ, ಔಷಧಿ ದಾಸ್ತಾನು ಇತ್ಯಾದಿ ವಿಚಾರಗಳಲ್ಲಿ ಯಾವುದೇ ಸಿದ್ಧತೆಗಳು ಸಹ ಮಾಡಿಕೊಂಡಿಲ್ಲ ಎಂದು ಆರೋಪಿಸಿದ ಕಾಂಗ್ರೆಸ್ ಮುಖಂಡರು ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯವೇ ಮೂಲ ಕಾರಣ ಎಂದು ದೂರಿದ್ದಾರೆ.

ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಪ್ರಿಯಾಂಕ್ ಖರ್ಗೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಕ್ಷಣ ರೆಮಿಡೆಸಿವೀರ್ ಇಂಜೆಕ್ಷನ್ ಎಲ್ಲರಿಗೂ ದೊರಕುವಂತೆ ಮಾಡಬೇಕು, ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಬಿಜೆಪಿ ಸರ್ಕಾರಕ್ಕೆ 2ನೇ ಅಲೆ ಗೊತ್ತಿದ್ದರೂ ಸಿದ್ಧತೆ ಮಾಡಿಕೊಳ್ಳದೆ ಮೌನವಾಗಿ ಕುಳಿತಿದೆ. ಇದರಿಂದಲೇ ಎಲ್ಲೆಡೆ ಸೋಂಕಿನ ಅಟ್ಟಹಾಸ ಶುರುವಾಗಿದೆ. ಕಳೆದ 10 ದಿನದಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶೇ.200ರಿಂದ 700ರಷ್ಟು ತಲುಪಿದೆ. ಆದರೆ ವೆಬ್ ಪೋರ್ಟ್ನಲ್ಲಿ ಈ ಸಂಖ್ಯೆ 1 ಸಾವಿರ ಗಡಿದಾಟಿದೆ. ಸರ್ಕಾರ ಯಾಕೆ ಹೀಗೆ ಸಂಖ್ಯೆ ಹೇಳುವಲ್ಲಿ ಎಡವುತ್ತಿದೆ? ಕೊರೋನಾ ವಿಚಾರದಲ್ಲಿ ಯಾವುದೂ ಪಾರದರ್ಶಕವಾಗಿಲ್ಲ ಎಂದು ದೂರಿದರು.

ಕಳೆದ ಬಾರಿಯೂ ಕೆಕೆಆರ್ಡಿಬಿ ಕೊರೋನಾ ಆರಂಭಿಸಿತು. ಅಭಿವೃದ್ಧಿ ಹಣ ಇದಕ್ಯಾಕೆ ಎಂದು ತಾವು ಸದನದಲ್ಲಿ ಎತ್ತಿದ ಪ್ರಶ್ನೆಗೆ ಉತ್ತರವೇ ಕೊಟ್ಟಿಲ್ಲ. ಯಾರಿಗೆ, ಅದೆಷ್ಟುನೆರವು ದೊರಕಿತೋ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಕಲಬುರಗಿಯಲ್ಲಿ ಜಿಮ್ಸ್ ಟ್ರಾಮಾ ಕೇರ್ ಸೆಂಟರ್ ಕೋವಿಡ್ ಆಸ್ಪತ್ರೆ ಬಿಟ್ಟರೆ ಇನ್ನೊಂದು ವ್ಯವಸ್ಥೆ ಇಲ್ಲ, ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಿಲ್ಲ, ಹಳ್ಳಿಗಾಡಿನ ಜನತೆ ಚಿಕಿತ್ಸೆಗೂ ಪರದಾಡುತ್ತಿದ್ದಾರೆ. ಟ್ರಾಮಾ ಕೇರ್ ಸೆಂಟರ್ ಮುಂದೆ ಸರತಿಯಲ್ಲಿ ಜನ ನಿಲ್ಲುವಂತಾಗಿದೆ. ತಕ್ಷಣ ಜಿಮ್ಸ್ಲ್ಲೇ ಇನ್ನೊಂದು 100 ಹಾಸಿಗೆ ಕಾಳಜಿ ಕೇಂದ್ರ ಆರಂಭಿಸಲಿ ಎಂದು ಡಾ. ಶರಣಪ್ರಕಾಶ ಆಗ್ರಹಿಸಿದ್ದಾರೆ.

Related