ರಾಮನಗರ : ಯೋಗೇಶ್ವರ್ ಅವರು ಕ್ಷೇತ್ರದಲ್ಲಿ ವಸೂಲಿ ದಂಧೆ ಮಾಡುತ್ತಿದ್ದಾರೆಂಬ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಎಂಎಲ್ಸಿ ಸಿ.ಪಿ ಯೋಗೇಶ್ವರ್ ತಿರುಗೇಟು ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಸಿ.ಪಿ ಯೋಗೇಶ್ವರ್ ಸಮಯ ಬಂದಾಗ ಕುಮಾರಸ್ವಾಮಿ ಬಗ್ಗೆ ಮಾತನಾಡ್ತೇನೆ, ಮುಂದಿನ ದಿನಗಳಲ್ಲಿ ಇದಕ್ಕೆಲ್ಲ ಉತ್ತರ ಕೊಡ್ತೇನೆ ಎಂದು ಹೇಳಿದರು.
ಹೀಗೆಲ್ಲ ಮಾತನಾಡುವುದು ಮಾಜಿ ಸಿಎಂ ಕುಮಾರಸ್ವಾಮಿಯವರ ಚಾಳಿ, ಅಚಾನಕ್ಕಾಗಿ ಎರಡು ಬಾರಿ ಸಿಎಂ ಆಗಿದ್ದವರು. ಹಾಗಾಗಿ ಹಗುರವಾಗಿ ಮಾತನಾಡೋದನ್ನು ಬಿಡಿ ಎಂದು ಕಿಡಿಕಾರಿದರು.
ನನಗೆ ಅವರಿಗಿಂತಲೂ ಚೆನ್ನಾಗಿ ಮಾತನಾಡಲು ಬರುತ್ತೆ, ಮುಂದೆ ಗಂಭೀರವಾಗಿ ಮಾತನಾಡಲು ಕಲಿತುಕೊಳ್ಳಲಿ. ಯಾರ್ಯಾರ ದಾಖಲೆ ಇಟ್ಟುಕೊಂಡಿದ್ದಾರೆಂದು ಅವರನ್ನೇ ಕೇಳಬೇಕು ಎಂದು ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಅವರು ಜೆಡಿಎಸ್ ನಾಯಕ ಎಚ್ಡಿಕೆಗೆ ಟಾಂಗ್ ನೀಡಿದರು.
ಹೈಕಮಾಂಡ್ ಹಾಗೂ ಸಿಎಂ ಯಡಿಯೂರಪ್ಪ ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡೋಣ. ನಾನು ಈ ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೇನೆ, ನಾನು ಇದೀಗ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಸಚಿವ ಸ್ಥಾನ ಸಿಕ್ಕಿದರೆ ರಾಜ್ಯವ್ಯಾಪಿ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ಸಿ.ಪಿ.ಯೋಗೀಶ್ವರ್ ಅವರು ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದರು.