ಕೋವಿಡ್ ಬಂದಿದೆ ಎಂದು ಹೆದರಿ ದಂಪತಿ ಆತ್ಮಹತ್ಯೆ

ಕೋವಿಡ್ ಬಂದಿದೆ ಎಂದು ಹೆದರಿ ದಂಪತಿ ಆತ್ಮಹತ್ಯೆ

ಮಂಗಳೂರು: ಕೋವಿಡ್ ಬಂದಿರಬಹುದೆಂಬ ಭೀತಿಯಿಂದ ಮಂಗಳೂರಿನ ಸೂರತ್ಕಲ್ನ ಚಿತ್ತಾಪುರದ ರೆಹೆಜಾ ಅಪಾರ್ಟ್ಮೆಂಟ್ನ 8ನೇ ಮಹಡಿಯಲ್ಲಿ ರಮೇಶ್ ಸುವರ್ಣ, ಗುಣ ಸುವರ್ಣ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ನಡೆದಿದೆ. ಆತ್ಮಹತ್ಯೆಗೂ ಮುನ್ನ ದಂಪತಿ ಬರೆದಿರುವ ಡೆತ್ನೋಟ್ ಪೊಲೀಸರಿಗೆ ಸಿಕ್ಕಿದೆ.

ಮೃತ ರಮೇಶ್ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಹಾಗೂ ತನ್ನ ಸ್ನೇಹಿತರಿಗೆ ವಾಯ್ಸ್ ಮೆಸೇಜ್ ಹಾಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ತಕ್ಷಣ ಶಶಿಕುಮಾರ್ ಸ್ಥಳೀಯ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಬಂದು ಬಾಗಿಲು ಒಡೆದು ನೋಡುವಷ್ಟರಲ್ಲಿ ಈ ದಂಪತಿ ಸಾವಿಗೆ ಶರಣಾಗಿದ್ದರು. ತಮಗೆ ಸೇರಿದ ಒಂದು ಲಕ್ಷ ಹಣವನ್ನು ಅಂತ್ಯ ಸಂಸ್ಕಾರಕ್ಕೆ ಬಳಸಿಕೊಳ್ಳಿ, ಮನೆಯಲ್ಲಿರುವ ಸಾಮಾಗ್ರಿಗಳನ್ನು ಬಡವರಿಗೆ ಕೂಡಿ ಎಂದು ಡೆತ್ನೋಟ್ನಲ್ಲಿ ಬರೆದಿದ್ದಾರೆ.

ದಂಪತಿ ಸಾವಿಗೀಡಾದ ನಂತರ ಮೃತ ದೇಹಗಳ ಕೊರೊನಾ ಪರೀಕ್ಷೆ ನಡೆಸಿದ್ದು, ಅದರಲ್ಲಿ ನೆಗೆಟಿವ್ ಬಂದಿದೆ ಎಂದು ಸೂರತ್ಕಲ್ ಪೊಲೀಸರು ತಿಳಿಸಿದ್ದಾರೆ. ಈ ದಂಪತಿ ಕೆಮ್ಮು, ನೆಗಡಿ, ಮೈ-ಕೈ ನೋವು ಬಂದಿದ್ದರಿಂದ ಕೊರೊನಾ ಬಂದಿರಬಹುದೆಂಬ ತಪ್ಪು ಕಲ್ಪನೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ.

ಸೂರತ್ಕಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Related