ಉಪಚುನಾವಣೆ ಮೇಲೆ ಕೊರೋನಾ ಕರಿನೆರಳು

ಉಪಚುನಾವಣೆ ಮೇಲೆ ಕೊರೋನಾ ಕರಿನೆರಳು

ಕಲಬುರಗಿ : ರಾಜ್ಯ ರಾಜಕಾರಣದ ಮೇಲೂ ಕೊರೋನಾ ಹಾವಳಿ. ಮುಖ್ಯಮಂತ್ರಿ ಯಡ್ಯೂರಪ್ಪನವರಿಗೆ ಕೊರೋನಾ ಧೃಡಪಟ್ಟು ಎಂ.ಎಸ್. ರಾಮಯ್ಯ ಆಸ್ಪತ್ರೆ ಸೇರಿದ್ದರೆ, ಇನ್ನೊಂದೆಡೆ ಮಸ್ಕಿ ಬಿಜೆಪಿ ಅಭ್ಯರ್ಥಿ ಪ್ರತಾಪ ಗೌಡ ಪಾಟೀಲ್‌ರವರಿಗೆ ಕೆಲ ದಿನಗಳ ಹಿಂದಷ್ಟೆ ಕೊರೋನಾ ಧೃಡಪಟ್ಟಿತ್ತು.

ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಹಿರಂಗ ಪ್ರಚಾರ ಗುರುವಾರ ಅಂತ್ಯಗೊAಡಿತ್ತು. ಮೂರು ಕ್ಷೇತ್ರಗಳ ಉಪಚುನಾವಣೆಗೆ ಇಂದು ಮತದಾನ ನಡೆಯಲಿದ್ದು, ಮೇ.2 ರಂದು ಫಲಿತಾಂಶ ಹೊರಬೀಳಲಿದೆ.

ಪ್ರತಾಪ್‌ಗೌಡರವರು ಈಗಾಗಲೇ ಐಸೋಲೇಷನ್‌ನಲ್ಲಿದ್ದು, ಕಾರ್ಯಕರ್ತರಿಗೆ ವಿಡಿಯೋ ಸಂದೇಶ ರವಾನಿಸಿದ್ದಾರೆ. ನನ್ನೊಂದಿಗೆ ಸಂಪರ್ಕದಲ್ಲಿದ್ದವರು ಪರೀಕ್ಷೆಗೊಳಗಾಗುವಂತೆ ಮನವಿ ಮಾಡಿಕೊಂಡಿದ್ದರು. ಅಲ್ಲದೆ, ತಾವು ಐಸೋಲೇಷನ್ ನಲ್ಲಿರುವುದರಿಂದ ಚುನಾವಣಾ ಪ್ರಚಾರಕ್ಕೆ ಆಗಮಿಸಲು ಸಾಧ್ಯವಿಲ್ಲ. ಚುನಾವಣಾ ದಿನದಂದೂ ಕೂಡ ತಾವು ಐಸೋಲೇಷನ್ ನಲ್ಲಿಯೇ ಇರುವುದಾಗಿ ಹೇಳಿದ್ದಾರೆ.

ಇನ್ನು ಮಸ್ಕಿಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೂ ಕೊರೋನಾ ಪಾಸಿಟಿವ್ ಬಂದಿದೆ. ಇದರಂತೆ ಮಸ್ಕಿಯಲ್ಲಿ ಪ್ರಚಾರಕ್ಕಿಳಿದಿದ್ದ ಸುರಪುರ ಶಾಸಕ ಜಿ. ರಾಜುಗೌಡ ಅವರಿಗೂ ಕೊರೋನಾ ಸೋಂಕು ತಗುಲಿದೆ.

ನಾಯಕರಲ್ಲಿ ಕೊರೋನಾ ಸೋಂಕು ಹೆಚ್ಚಾಗಿ ಕಾಣಿಸಿಕೊಂಡ ಬಳಿಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಸಿಎಂ ಯಡಿಯೂರಪ್ಪ ಬಸವಕಲ್ಯಾಣ ಹಾಗೂ ಮಸ್ಕಿಯಲ್ಲಿ ಪ್ರಚಾರ ಕಾರ್ಯ ನಡೆಸಿದರು.

ಇನ್ನು ಕಾಂಗ್ರೆಸ್ ನಲ್ಲಿಯೂ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಕೆಲ ನಾಯಕರಲ್ಲಿ ಕೊರೋನಾ ಸೋಂಕು ತಗುಲಿದ್ದು ಕಂಡು ಬಂದಿತು.
ಬಸವಕಲ್ಯಾಣ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಈಶ್ವರ ಖಂಡ್ರೆಯವರಿಗೆ ಕೊರೋನಾ ಸೋಂಕು ತಗುಲಿತ್ತು. ನಾಯಕರಲ್ಲಿ ಕೊರೋನಾ ಸೋಂಕು ದೃಢಪಟ್ಟ ಬಳಿಕ ಅವರ ಕಾರ್ಯಕರ್ತರಲ್ಲಿಯೂ ಕೊರೋನಾ ಸೋಂಕು ತಗುಲಿದ್ದು ಕಂಡು ಬಂದಿತು.

ಕೊರೋನಾ ಆತಂಕದ ನಡುವಲ್ಲೂ ಚುನಾವಣೆಯನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡಿರುವ ಮೂರು ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ನಡೆಸಿದರು. ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ, ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ಸೋಮಣ್ಣ, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಬಸವಕಲ್ಯಾಣದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಮಿ ಹಾಗೂ ಜೆಡಿಎಸ್ ಹಿರಿಯ ನಾಯಕ ಬಂಡೆಪ್ಪ ಕಾಶೆಂಪುರ್ ಅವರು ಸುದೀರ್ಘವಾಗಿ ಪ್ರಚಾರ ಕಾರ್ಯ ನಡೆಸಿದರು.

ಕಾಂಗ್ರೆಸ್ಸಿನ ಹಿರಿಯ ಮುಖಂಡರು ಮತ್ತು ಕೆಲ ಶಾಸಕರು ಬಸವಕಲ್ಯಾಣದ 38-40 ಹಳ್ಳಿಗಳಲ್ಲಿ ಗುಂಪುಗಳ ಮೂಲಕ ಪ್ರಚಾರ ನಡೆಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಇತರರು ಬಸವಕಲ್ಯಾಣದ ತಮ್ಮ ಅಭ್ಯರ್ಥಿಯಾದ ಮಾಲಾ ಬಿ ನಾರಾಯಣ ರಾವ್ ಮತ್ತು ಮಸ್ಕಿಯಲ್ಲಿ ಬಸವನ ಗೌಡ ಅವರ ಪರ ಪ್ರಚಾರ ನಡೆಸಿದರು.

 

Related