ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ಹಾಲಿ ಸಂಸದ ಶ್ರೀನಿವಾಸ್ ಪ್ರಸಾದ್ ಇಂದು ಭೇಟಿಯಾಗಿದ್ದು ಸುಮಾರು ಏಳು ವರ್ಷದ ನಂತರ ಸಿದ್ದರಾಮಯ್ಯ ಅವರನ್ನು ಹಾಲಿ ಸಂಸದ ಶ್ರೀನಿವಾಸ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಮುಖಂಡರೂ ಮಾಜಿ ಸಚಿವರೂ ಆದ ಹಾಲಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಮೈಸೂರಿನ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.
ಇಬ್ಬರೂ ಕೂಡ ರಾಜಕೀಯವಾಗಿ ಜೊತೆಯಲ್ಲಿ ನಡೆದುಕೊಂಡ ಬಂದಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಶ್ರೀನಿವಾಸ್ ಪ್ರಸಾದ್ ಅವರು ಇಬ್ಬರು ಒಂದೇ ವಯಸ್ಸಿನವರಾಗಿದ್ದರಿಂದ ಇವರ ಮಧ್ಯೆ ಸ್ವಲ್ಪ ವರ್ಷಗಳ ಹಿಂದೆ ರಾಜಕೀಯ ವಿಷಯಕ್ಕೆ ಸಂಬಂಧಿಸಿದಂತೆ ಕಲಹವಾಗಿದ್ದನ್ನು ಮರೆತು ಇಂದು ಭೇಟಿ ಮಾಡಿದ್ದಾರೆ.
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಚಾಮರಾಜನಗರ ಬಿಜೆಪಿ ಸಂಸದ ವಿ ಶ್ರೀನಿವಾಸ ಪ್ರಸಾದ್ ನಡುವೆ ದಶಕಗಳಿಂದ ಸ್ನೇಹವಿದೆ. ಆದರೆ ಪ್ರಸಾದ್ ಅವರೇ ಇಂದು ಮಾಧ್ಯಮಗಳಿಗೆ ಹೇಳಿದ ಹಾಗೆ ಬೇರೆ ಬೇರೆ ಕಾರಣಗಳಿಗೆ ಅವರಿಬ್ಬರು ದೂರವಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿರುವ ಸಂಸದರ ಮನೆಗೆ ಇಂದು ಸಿದ್ದರಾಮಯ್ಯ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಿಸಿದರು.
ಅವರು ತೆರಳಿದ ಬಳಿಕ ಪತ್ರಕರ್ತರೊಡನೆ ಮಾತಾಡಿದ ಶ್ರೀನಿವಾಸ್ ಪ್ರಸಾದ್, ಮುಖ್ಯಮಂತ್ರಿಯವರ ಜೊತೆ ಬಹಳ ವರ್ಷಗಳಿಂದ ಮಾತಾಡಿರಲಿಲ್ಲ, ಅವರು ಇಂದು ಮನೆಗೆ ಬಂದಿದ್ದರು ಮತ್ತು ಅರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದರು. ತಮ್ಮ ನಡುವೆ ರಾಜಕಾರಣದ ಬಗ್ಗೆ ಹೆಚ್ಚಿನ ಚರ್ಚೆಯೇನೂ ನಡೆಯಲಿಲ್ಲ, ಆದರೆ ತಾನೀಗ ರಾಜಕೀಯದಿಂದ ನಿವೃತ್ತನಾಗಿರುವುದರಿಂದ ಚುನಾವಣೆಯಲ್ಲಿ ಸಹಕರಿಸುವಂತೆ ಸಿದ್ದರಾಮಯ್ಯ ಕೋರಿದರು ಎಂದು ಪ್ರಸಾದ್ ಹೇಳಿದರು.