ಕುಡುಕನ ಅವಾಂತರಕ್ಕೆ ಬೆಚ್ಚಿದ ವೈದ್ಯರು!

ಕುಡುಕನ ಅವಾಂತರಕ್ಕೆ ಬೆಚ್ಚಿದ ವೈದ್ಯರು!

ಚಿಕ್ಕೋಡಿ: ಇಲ್ಲಿಯ ಯಕ್ಸಂಬಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕುಡಿದ ಮತ್ತಿನಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾನೆ.

ಆರೋಪಿ ಶಮನೇವಾಡಿಯ ಸಂಜಯಕುಮಾರ ಜಯಪಾಲ ಬನವಣ್ಣೆ ಎಂದು ತಿಳಿದುಬಂದಿದೆ.

ಈತ ಕುಡಿದ ಮತ್ತಿನಲ್ಲಿ ಗ್ರಾಮದ ಕೆಲವರೊಂದಿಗೆ ಜಗಳವಾಡಿ ಕೈಗೆ ಗಾಯ ಮಾಡಿಕೊಂಡಿದ್ದನು. ಪಕ್ಕದ ಯಕ್ಸಂಬಾದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಪಾಸಣೆ ಮಾಡಿಸಿಕೊಳ್ಳಲು ಹೋಗಿದ್ದನು. ಆರೋಗ್ಯ ಕೇಂದ್ರದಲ್ಲಿ ನರ್ಸ್ ಗಳು ಡ್ರೆಸ್ಸಿಂಗ್ ಮಾಡುವಾಗ ಔಷಧಿಯು ಉರಿದಿದ್ದರಿಂದ ಸಿಟ್ಟಿಗೆದ್ದ ಈತ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾನೆ.

ಅದಕ್ಕಿಂತ ಮೊದಲು ಆರೋಗ್ಯ ಕೇಂದ್ರದಲ್ಲಿ ಟೇಬಲ್ ಜಜ್ಜಿ, ಅಲ್ಲಿಯ ವೈದ್ಯಕೀಯ ಉಪಕರಣಗಳನ್ನು ನಾಶಪಡಿಸಿದ್ದಾನೆ. ವೈದ್ಯಕೀಯ ಸಿಬ್ಬಂದಿ ಮತ್ತು ನರ್ಸ್ ಗಳ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ಆತಂಕ ಸೃಷ್ಟಿಸಿದ್ದಾನೆ.

ಈತನನ್ನು ಪೊಲೀಸರು ಬಂಧಿಸಿದ್ದು, ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related