ಬಡವರ ನೆರವಿಗೆ ಮನೆ ಅಡವಿಟ್ಟ!

ಬಡವರ ನೆರವಿಗೆ ಮನೆ ಅಡವಿಟ್ಟ!

ಚಿಕ್ಕೋಡಿ : ಕೊರೋನಾ ವೈರಾಣು ತಡೆಗಟ್ಟಲು ಹೇರಲಾದ ಲಾಕ್‍ಡೌನ್‍ನಿಂದ ಕಂಗೆಟ್ಟಿರುವ ಬಡ, ಕೂಲಿ ಹಾಗೂ ನಿರ್ಗತಿಕರ ಕುಟುಂಬಗಳ ನೆರವಿಗೆ ಧಾವಿಸಿರುವ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ತಮ್ಮ ಮನೆಯನ್ನೇ ಅಡವಿಟ್ಟಿದ್ದಾರೆ. ತನ್ಮೂಲಕ ಈ ಗ್ರಾಪಂ ಸದಸ್ಯ ಇತರೆ ಚುನಾಯಿತಿ ಪ್ರತಿನಿಧಿಗಳಿಗೆ ಮಾದರಿಯಾಗಿ ಮಾನವೀಯತೆ ಮೆರೆದಿದ್ದಾರೆ.

ಹೌದು, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗವನಾಳ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ ವ್ಯಾಪಾರಿ ಅವರು ತಮ್ಮ ಮನೆಯ ಮೇಲೆ ಸಾಲ ಮಾಡಿ ಬಡವರಿಗೆ ದಿನಸಿ ವಸ್ತುಗಳ ಕಿಟ್‍ಗಳನ್ನು ನೀಡಿದ್ದಾರೆ. ತನ್ಮೂಲಕ ಬಡವರಲ್ಲಿ ಆತ್ಮಸ್ಥೈರ್ಯ ತುಂಬಿದ ಈ ಗ್ರಾಪಂ ಸದಸ್ಯನ ಕಾರ್ಯವೈಖರಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಲಾಕ್‍ಡೌನ್ ಹೇರಿ ಸುಮಾರು ಎರಡು ತಿಂಗಳು ಸಮೀಪಿಸುತ್ತಿದ್ದರೂ ಇದುವರೆಗೆ ಕ್ಷೇತ್ರದ ಸಂಸದ, ಶಾಸಕರು ಗ್ರಾಮದತ್ತ ಸುಳಿಯುತ್ತಿಲ್ಲ. ಜೊತೆಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪಿಲ್ಲ. ಇದರಿಂದ ಅನೇಕ ಬಡ ಕುಟುಂಬಗಳ ಹಸಿದ ಹೊಟ್ಟೆಗೆ ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ. ಇದನ್ನೆಲ್ಲಾ ಗಮನಿಸಿದ ಗ್ರಾಪಂ ಸದಸ್ಯ ಶ್ರೀನಿವಾಸ ವ್ಯಾಪಾರಿ ಅವರು ತಮ್ಮ ಮನೆಯನ್ನೇ ಅಡವಿಟ್ಟು ಸುಮಾರು 40 ಸಾವಿರ ಮೌಲ್ಯದ ವಿವಿಧ ದಿನಸಿ ವಸ್ತುಗಳನ್ನು ವಿತರಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿದವರಿಗೆ ಸ್ಪಂದಿಸಿ ಸಹೃದಯ ಸಾಮಾಜಿಕ ಕಳಕಳಿ ಪ್ರದರ್ಶಿಸಿದ್ದಾರೆ.

Related