ಚಿಕ್ಕೋಡಿ : ಕುಡಚಿ ಪಟ್ಟಣ ವಿಧಾನಸಭಾ ಕ್ಷೇತ್ರವಾಗಿದೆ, ಆದರೂ ಕೂಡಾ ಬಸ್ ನಿಲ್ದಾಣ ಒಂದೂ ಸ್ವಂತ ಕಟ್ಟಡ ಹೊಂದಿಲ್ಲ. ಕುಡಚಿ ಪಟ್ಟಣದಲ್ಲಿ ಅಂದಾಜು 40 ಸಾವಿರ ಅಧಿಕ ಜನಸಂಖ್ಯೆ ಹೊಂದಿದೆ.
ಹಳೆಯ ಬಸ್ ನಿಲ್ದಾಣವಿದ್ದು ಹಾಗೂ ಕುಡಚಿ ರೈಲು ನಿಲ್ದಾಣದಲ್ಲಿ ಬೆಳಗಾವಿ, ಘಟಪ್ರಭಾ ಬಿಟ್ಟರೇ ಎಲ್ಲ ವೇಗದೂತ ರೈಲುಗಳು ಕುಡಚಿಯಲ್ಲಿ ನಿಲುಗಡೆಯಾಗುತ್ತವೆ. ಇದರಿಂದ ಹಾರೂಗೇರಿ, ತೇರದಾಳ, ರಬಕವಿ-ಬನಹಟ್ಟಿ, ಜಮಖಂಡಿ, ಮಹಾಲಿಂಗಪೂರ ಹಾಗೂ ದೂರ ದೂರದ ಊರುಗಳಿಂದ ಬೆಂಗಳೂರು ಹಾಗೂ ಮುಂಬೈ, ದೆಹಲಿ ಕಡೆಗೆ ರೈಲು ಪ್ರಯಾಣಕ್ಕಾಗಿ ಜನ ಕುಡಚಿಗೆ ಬರುತ್ತಾರೆ. ಇದರಿಂದ ದಿನಾ ಮಿರಜ-ಜಮಖಂಡಿ ಮಧ್ಯೆ ಕುಡಚಿ ಮಾರ್ಗವಾಗಿ ಸುಮಾರು 300 ಬಸ್ಗಳು ಓಡಾಡುತ್ತವೆ.
ತಾಲೂಕಿನಲ್ಲಿಯೇ ದೊಡ್ಡ ಪಟ್ಟಣವಾದ ಕುಡಚಿಯಲ್ಲಿ ಇಷ್ಟೆಲ್ಲಾ ರೀತಿಯ ಸೌಲಭ್ಯ-ಸಂಪರ್ಕಗಳನ್ನು ಹೊಂದಿದ್ದರು. ಕುಡಚಿಯತ್ತ ಪ್ರಯಾಣಿಸುವ ಪ್ರಯಾಣಿಕರಿಗೆ ಒಂದು ಸುಸಜ್ಜಿತ ಬಸ್ ನಿಲ್ದಾಣವಿಲ್ಲದಿರುವುದು ಒಂದು ಖೇದವಾಗಿದೆ. ಮೊದಲು ಇಲ್ಲಿ ಹಳೇ ಕಟ್ಟಡದಲ್ಲಿ ಬಸ್ಗಳ ನಿಯಂತ್ರಣಕ್ಕಾಗಿ ಒಬ್ಬ ಕಂಟ್ರೋಲರ್ ಇರುತ್ತಿದ್ದರು. ಅವರು ನಿವೃತ್ತಿ ಹೊಂದಿದ ನಂತರ ಯಾರನ್ನು ನೇಮಿಸದಿರುವುದರಿಂದ ಜನರಿಗೆ ಬಸ್ಸುಗಳ ಸಮಯವನ್ನು ತಿಳಿದುಕೊಳ್ಳಲು ತೊಂದರೆಯಾಗುತ್ತಿದೆ.
ಈ ಸ್ಥಳದಲ್ಲಿದ್ದ ಹಳೇ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಅದು ಅಸ್ವಚ್ಛತೆಯ ತಾಣವಾಗಿರುವುದರ ಜೊತೆಗೆ ತಿಪ್ಪೆಯಾಗುತ್ತಿದೆ. ದೂರದಿಂದ ಬಂದ ಪ್ರಯಾಣಿರಿಗೆ ಒಂದು ಶೌಚಾಲಯವು ಗತಿ ಇಲ್ಲದ ಈ ನಿಲ್ದಾಣದಲ್ಲಿ ಯಾರೇ ಬಂದರೂ ಒಂದು ನಿಮಿಷ ಕೂಡ ನಿಲ್ಲಲಾಗದ ಪರಿಸ್ಥಿತಿ ಬಂದೊದಗಿದ್ದು ಇನ್ನೂ ಮಹಿಳೆಯರಿಗಂತೂ ತುಂಬಾ ಕಷ್ಟಕರ ವಾತಾವರಣವಾಗಿದೆ.
ಸಚಿವರು, ಶಾಸಕರು ಮತ್ತು ಚುನಾವಣೆ ಬಂದಾಗ ಮಾತ್ರ ಇತ್ತ ಕಡೆ ಗಮನ ಹರಿಸಿ ಬಸ್ ನಿಲ್ದಾಣವನ್ನು ಮಾಡಬೇಕೆಂದು ಸಾರ್ವಜನಿಕರ ಆಗ್ರವಾಗಿದೆ.