ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರಲಿದೆ ಬಿಎಸ್‌ವೈ

ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರಲಿದೆ ಬಿಎಸ್‌ವೈ

ಸವದತ್ತಿ: ದೇಶದಲ್ಲಿ ಬಿಜೆಪಿ ಪಕ್ಷದ ಕಾರ್ಯವೈಖರಿ ಅತ್ಯುತ್ತಮವಾಗಿದ್ದು, ಕಾಂಗ್ರೆಸ್‌ ಮುಕ್ತ ಭಾರತ ವನ್ನು ಮಾಡುವ ನಿಟ್ಟಿನಲ್ಲಿ ನಾವೆಲ್ಲ ಬದ್ಧರಾಗಬೇಕು ಎಂದು ಮಾಜಿ ಸಿಎಂ ಬಿಎಸ್‌ವೈ ಹೇಳಿದರು.

ಸ್ಥಳೀಯ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಬಿಜೆಪಿ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 135 ಸೀಟುಗಳು ಬಿಜೆಪಿ ಪಕ್ಷದಿಂದ ಬರಲಿದ್ದು, ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಇದನ್ನು ರಕ್ತದಲ್ಲಿ ಬೇಕಾದರೇ ಬರೆದುಕೊಡುವೆ. ಇಡೀ ವಿಶ್ವವನ್ನೇ ಮೆಚ್ಚಿದ ನರೇಂದ್ರ ಮೋದಿಯವರನ್ನು ಯಾರಿಗೂ ಹೋಲಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸುವಲ್ಲಿ ದೇಶದ ಅನೇಕ ರಾಜ್ಯಗಳಿಂದ ಪ್ರಮುಖರು ಬರುತ್ತಿದ್ದು, ಯಾವುದೇ ಅನುಮಾನ ಬೇಡ. ಬಿಜೆಪಿ ಸರ್ಕಾರ ನಿಶ್ಚಿತ ಎಂದರು.

ಕೊರೋನಾ ಸಂದರ್ಭದಲ್ಲಿ ಜಗತ್ತಿಗೆ ಲಸಿಕೆ ನೀಡಿದ ದೇಶ ನಮ್ಮದಾಗಿದ್ದು, ಅದಕ್ಕೆ ನರೇಂದ್ರ ಮೋದಿ ಯಂತ ಪ್ರಧಾನಿಯವರು ಕಾರಣ. 9 ವರ್ಷದಲ್ಲಿ ಭಾರತದ ಇತಿಹಾಸವನ್ನು ಜಗತ್ತಿಗೆ ಪ್ರಸಿದ್ಧ ಮಾಡಿ ಪಕ್ಷ ಬಿಜೆಪಿ ಪಕ್ಷವಾಗಿದೆ.

ಹಿಂದುಗಳನ್ನು ತುಳಿಯುವಂತ ಕೆಲಸ ದೇಶದಲ್ಲಿ ನಡೆಯುತ್ತಿದ್ದು, ದೇಶವನ್ನು ಕಟ್ಟುವಲ್ಲಿ ಬಿಜೆಪಿ ಬದ್ಧವಾಗಿದೆ. ಮೀಸಲಾತಿ ಕೇವಲ ಪಂಚಮಸಾಲಿಗಳಿಗೆ ಮಾತ್ರ ಸಿಕ್ಕಿಲ್ಲ, ಎಲ್ಲ ಸಮುದಾಯಗಳಿಗೆ ದೊರಕಿದ್ದು, ಇದನ್ನು ಮಾಡಿದ್ದು ಬಿಜೆಪಿ ಪಕ್ಷ. ಜನಪರವಾಗಿರುವಂತ ಬಿಜೆಪಿಗೆ ಮತ ನೀಡುವ ಮೂಲಕ ರತ್ನಾ ಆನಂದ ಮಾಮನಿಯವರನ್ನು ಆಯ್ಕೆ ಮಾಡಬೇಕು ಎಂದು ಕೋರಿದರು.

ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಮಾತನಾಡಿ, ಮತಕ್ಷೇತ್ರದಲ್ಲಿ ನಮ್ಮ ಯಜಮಾನರು ಮಾಡಿದಂತ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನನಗೆ ಮತ ನೀಡುವ ಮೂಲಕ ಅವರ ಆಸೆಗಳನ್ನು ಈಡೇರಿಸಲು ಸಹಕಾರ ನೀಡಬೇಕು ಎಂದರು.

 

Related