ಬಿಬಿಎಂಪಿಯು ಅತ್ಯುತ್ತಮ ಆರ್.ಆರ್.ಆರ್ ನಗರ ವಾಗಿ ಆಯ್ಕೆ

ಬಿಬಿಎಂಪಿಯು ಅತ್ಯುತ್ತಮ ಆರ್.ಆರ್.ಆರ್ ನಗರ ವಾಗಿ ಆಯ್ಕೆ

ಬೆಂಗಳೂರು: ನಗರರಾಭಿವೃದ್ಧಿ ಇಲಾಖೆಯ ಪೌರಾಡಳಿತ ನಿರ್ದೇಶನಾಲಯದಿಂದ ನಡೆಸಿರುವ ನನ್ನ ಜೀವನ, ನನ್ನ ಸ್ವಚ್ಛ ನಗರ ಅಭಿಯಾನದಲ್ಲಿ ಬಿಬಿಎಂಪಿಯು ಕರ್ನಾಟಕದಲ್ಲಿ ಅತ್ಯುತ್ತಮ ಆರ್.ಆರ್.ಆರ್ ನಗರ ವಾಗಿ ಆಯ್ಕೆಯಾಗಿದೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ “ನನ್ನ ಜೀವನ, ನನ್ನ ಸ್ವಚ್ಛ ನಗರ” ಎಂಬ ದ್ಯೇಯೆಯೊಂದಿಗೆ ಮೇ 15 ರಿಂದ ಪರಿಸರ ದಿನವಾದ ಜೂನ್ 5 ರವರೆಗೆ ದೊಡ್ಡ ಪ್ರಮಾಣದ ಮತ್ತು ಉನ್ನತ-ಪ್ರಭಾವದ ರಾಷ್ಟ್ರೀಯ ಅಭಿಯಾನವನ್ನು ಪ್ರಾರಂಭಿಸಿತು. ಈ ಸಂಬಂಧ ನಗರರಾಭಿವೃದ್ಧಿ ಇಲಾಖೆಯ ಪೌರಾಡಳಿತ ನಿರ್ದೇಶನಾಲಯವು ಕರ್ನಾಟಕ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನನ್ನ ಜೀವನ, ನನ್ನ ಸ್ವಚ್ಛ ನಗರ ಎಂಬ ದ್ಯೇಯೆಯೊಂದಿಗೆ ಕೇಂದ್ರಗಳನ್ನು ಸ್ಥಾಪಿಸಲು ತಿಳಿಸಿತ್ತು.

ಅದರಂತೆ, ಬಿಬಿಎಂಪಿ ವ್ಯಾಪ್ತಿಯ 49 ವಾರ್ಡ್ ಗಳಲ್ಲಿ ಆರ್.ಆರ್.ಆರ್ ಕೇಂದ್ರಗಳನ್ನು ತೆರೆದು ಮನೆಗಳಲ್ಲಿ ಬಳಕೆಯಾಗದ ಪುಸ್ತಕಗಳು, ಆಟಿಕೆಗಳು, ಕಬ್ಬಿಣದ ಉತ್ಪನ್ನ ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳನ್ನು ಕೇಂದ್ರಗಳಲ್ಲಿ ನೀಡಿದರೆ ಅದನ್ನು ಪುನರ್ ಬಳಕೆ ಮಾಡುವ ಜೊತೆಗೆ ನಗರವನ್ನು ಸ್ವಚ್ಛ ನಗರವನ್ನಾಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ನನ್ನ ಜೀವನ, ನನ್ನ ಸ್ವಚ್ಛ ನಗರ ಅಭಿಯಾನದಲ್ಲಿ ವಿಭಿನ್ನ ಆಯ್ಕೆ ಮಾನದಂಡಗಳ ಆಧಾರದ ಮೇಲೆ ರಾಜ್ಯವು ಬೆಂಗಳೂರು ನಗರವನ್ನು ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆರ್.ಆರ್.ಆರ್ ನಗರಗಳಲ್ಲಿ ಒಂದಾಗಿ ಆಯ್ಕೆ ಮಾಡಿದ್ದು, ಇಂದು ಬೆಂಗಳೂರಿನ ದಿ ಚಾನ್ಸೆರಿ ಪೆವಿಲಿಯನ್ ಹೋಟೆಲ್‌ನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಕುರಿತು ಪೌರಾಡಳಿತ ನಿರ್ದೇಶನಾಲಯ ನಡೆಸಿದ ಕಾರ್ಯಾಗಾರದಲ್ಲಿ ಮಾನ್ಯ ಪೌರಾಡಳಿತ ಸಚಿವರಾದ ಶ್ರೀ ರಹೀಮ್ ಖಾನ್ ಹಾಗೂ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾದ ಶ್ರೀಮತಿ ಮಂಜುಶ್ರೀ ರವರು “ಅತ್ಯುತ್ತಮ ಆರ್.ಆರ್.ಆರ್ ನಗರ” ಪ್ರಶಸ್ತಿ ಹಾಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದರು.

ಈ ವೇಳೆ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಬಸವರಾಜ್ ಕಬಾಡೆ, ಘನತ್ಯಾಜ್ಯ ನಿರ್ವಹಣೆ ವಿಭಾಗದ ಮುಖ್ಯ ಅಭಿಯಂತರರಾದ ಪ್ರವೀಣ್ ಲಿಂಗಯ್ಯ, ಚೀಪ್ ಮಾರ್ಷಲ್ ರಾಜಬೀರ್ ಸಿಂಗ್ ಸೇರಿದಂತೆ ಇನ್ನಿತತರು ಉಪಸ್ಥಿತರಿದ್ದರು.

 

Related