ಜಕ್ಕೂರು ಕೆರೆ ಪರಿಶೀಲನೆ – ತುಷಾರ್ ಗಿರಿ ನಾಥ್

ಜಕ್ಕೂರು ಕೆರೆ ಪರಿಶೀಲನೆ – ತುಷಾರ್ ಗಿರಿ ನಾಥ್

ಬೆಂಗಳೂರು, ಜು 07 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲಹಂಕ ವಲಯ ವ್ಯಾಪ್ತಿಯಲ್ಲಿರುವ ಜಕ್ಕೂರು ಕೆರೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮರ್ಪಕ ಯೋಜನೆ ರೂಪಿಸಿಕೊಂಡು ತ್ವರಿತವಾಗಿ ಕಾಮಗಾರಿ ಪ್ರಾರಂಭಿಸಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಕೆರೆಗಳ ವಿಭಾಗದ ಮುಖ್ಯ ಅಭಿಯಂತರರಿಗೆ ಸೂಚನೆ ನೀಡಿದರು.

110 ಎಕರೆ ಪ್ರದೇಶದಲ್ಲಿರುವ ಜಕ್ಕೂರು ಕೆರೆಯನ್ನು ಅಮೃತ ನಗರೋತ್ಥಾನ ಯೋಜನೆಯಡಿ ರೂ.1.10 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದು, ಅದರಡಿ ಯಾವ್ಯಾವ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸಿಕೊಂಡು ಟೆಂಡರ್ ಆಹ್ವಾನಿಸಿ ತ್ವರಿತವಾಗಿ ಕೆಲಸ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅದರಂತೆ, ತಜ್ಞರೊಂದಿಗೆ ಸಮಾಲೋಚಿಸಿ ವೆಟ್ ಲ್ಯಾಂಡ್ ನವೀಕರಣಗೊಳಿಸುವ, ಶೌಚಾಲಯವನ್ನು ನವೀಕರಣಗೊಳಿಸುವ,

ಒಳಹರಿವಿನ ಸುಧಾರಣೆ ಮತ್ತು ಒಳಹರಿವಿನ ಭಾಗಕ್ಕೆ ಫೆನ್ಸಿಂಗ್ ಅಳವಡಿಸುವ, ಜಲಪೋಷಣ ಸಂಘದವರ ಕೋರಿಕೆಯಂತೆ ವಾಚ್ ಟವರ್ ಹಾಗೂ ಮಾಹಿತಿ ಕೇಂದ್ರವನ್ನು ಸ್ಥಾಪಿಸಲು ಕೂಡಾ ಅಂದಾಜು ಪಟ್ಟಿಯಲ್ಲಿ ಪರಿಶೀಲಿಸಿಕೊಂಡು ಅಳವಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಪರಿಶೀಲನೆಯ ವೇಳೆ ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ, ಕೆರೆಗಳ ವಿಭಾಗದ ಮುಖ್ಯ ಅಭಿಯಂತರರಾದ ಮೋಹನ್ ಕೃಷ್ಣಾ, ವಲಯ ಮುಖ್ಯ ಅಭಿಯಂತರರಾದ ರಂಗನಾಥ್, ಕಾರ್ಯಪಾಲಕ ಅಭಿಯಂತರರು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Related