ಹಿಟ್ಟಿನ ಗಿರಣಿಯಲ್ಲೇ ನೇಣಿಗೆ ಶರಣಾದ ರೈತ

ಹಿಟ್ಟಿನ ಗಿರಣಿಯಲ್ಲೇ ನೇಣಿಗೆ ಶರಣಾದ ರೈತ

ಹಾವೇರಿ : ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ತವರು ಜಿಲ್ಲೆಯಲ್ಲೇ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದ್ದು, ಜೆಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ. ಶುಕ್ರವಾರ ಬೆಳ್ಳಂಬೆಳಗ್ಗೆ ಮತ್ತೊಬ್ಬ ತನ್ನ ಮನೆಯಲ್ಲಿದ್ದ ಹಿಟ್ಟಿನ ಗಿರಣಿಯಲ್ಲೇ ನೇಣಿಗೆ ಕೊರಳೊಡ್ಡಿದ್ದಾರೆ.

ವೀರಪ್ಪ, ಭರಮಪ್ಪ, ಬಸಪ್ಪ, ಹನುಮಂತಪ್ಪ ಮೃತರು. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಬಸಪ್ಪ ಉಗ್ಗಿ(45) ಕೆನರಾ ಬ್ಯಾಂಕಿನಲ್ಲಿ 70 ಸಾವಿರ ರೂಪಾಯಿ ಸಾಲ, ಕೈಗಡ ಅಂತ 10 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು. ಹೈನುಗಾರಿಕೆಗೆಂದು ತಂದಿದ್ದ ಎತ್ತು, ಎಮ್ಮೆಗಳ ಮೇಲೂ ಲೋನ್ ಪಡೆದಿದ್ದರು. ಬಿತ್ತನೆ ಮಾಡಿದ್ದ ಈರುಳ್ಳಿ ಬೆಳೆಯೂ ಹಾಳಾಗಿ ಸಾಲಕ್ಕೆ ಹೆದರಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಟ್ಟಿಹಳ್ಳಿ ತಾಲೂಕಿನ ನಾಗವಂದ ಹಾಗೂ ಮಾವಿನತೋಪು ಗ್ರಾಮಗಳಲ್ಲಿ ಗುರುವಾರ ಒಂದೇ ದಿನ ಪ್ರತ್ಯೇಕ ಘಟನೆಯಲ್ಲಿ ರೈತರಾದ ವೀರಪ್ಪ ಆನ್ವೇರಿ (52) ಮತ್ತು ಭರಮಪ್ಪ ಕುರುಬರ (52) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೀರಪ್ಪ ಆನ್ವೇರಿ ಅವರು ಕೆವಿಜಿ ಬ್ಯಾಂಕಿನಲ್ಲಿ 1.10 ಲಕ್ಷ ರೂ. ಹಾಗೂ ಕೈಗಡವಾಗಿ 2 ಲಕ್ಷ ಸಾಲ ಮಾಡಿಕೊಂಡಿದ್ದರು.

ಭರಮಪ್ಪ ಅವರು ಕೆಜಿಬಿ ಬ್ಯಾಂಕಿನಲ್ಲಿ 3 ಲಕ್ಷ ರೂ., ದೇವರಾಜ ಅರಸು ನಿಗಮದಲ್ಲಿ 1 ಲಕ್ಷ ರೂ. ಹಾಗೂ ಕೈಗಡವಾಗಿ 3 ಲಕ್ಷ ರೂ. ಸಾಲ ಪಡೆದಿದ್ದರು. ಇವರು ಬಿತ್ತನೆ ಮಾಡಿದ್ದ ಬೆಳೆ ಹಾನಿಯಾಗಿ ತೀವ್ರ ನಷ್ಟ ಅನುಭವಿಸಿದ್ದರು. ಸಾಲ ತೀರಿಸುವುದ್ಹೇಗೆ ಎಂದು ಭಯಗೊಂಡ ಇವರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ.

ರಾಣೇಬೆನ್ನೂರು ತಾಲೂಕಿನ ರೈತ ಹನುಮಂತಪ್ಪ ಕೂಡ ಸಾಲದ ಶೂಲಕ್ಕೆ ಸಿಲುಕಿ ಬುಧವಾರ ಸಾವಿನ ಮನೆಯ ಕದ ತಟ್ಟಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Related