ಬೆಂಗಳೂರಿನಲ್ಲಿ ಇಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ರಸ್ತೆ ಗುಂಡಿ ಹಬ್ಬ ಆಚರಿಸಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ರಸ್ತೆ ಗುಂಡಿ ಮುಚ್ಚದೆ ಸಾವು ನೋವುವಿನ ಸಂಖ್ಯೆ ಹೆಚ್ಚಾಗುತ್ತಿದೆ. ದಿನನಿತ್ಯ ವಾಹನ ಸವಾರರು ಪರದಾಡುವ ಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲೇಶ್ವರ0, ಸರ್.ಸಿ.ವಿ ರಾಮನ್ ನಗರ, ಕಸ್ತೂರಿ ನಗರ, ಜೀವನ್ ಭೀಮಾ ನಗರ, ಬೊಮ್ಮನಹಳ್ಳಿ ಸೇರಿದಂತೆ ನಗರದ ಇತರೆಡೆ ರಸ್ತೆಗುಂಡಿಗಳಿಗೆ ಹೂ ಮುಡಿಸಿ ಪೂಜೆ ಮಾಡಿ, ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಕಿಡಿಕಾರಿದರು.
ರಸ್ತೆ ಅಭಿವೃದ್ಧಿಗೆ ಮೀಸಲ್ಲಿಟ್ಟ ಹಣವನ್ನು ಲೂಟಿ ಹೊಡೆಯಲಾಗಿದೆ. ರಾಜ್ಯ ಸರ್ಕಾರ ಈ ವಿಚಾರ ಗಂಭೀರವಾಗಿ ಪರಿಗಣಿಸಿ ೧೫ ದಿನದೊಳಗೆ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ನ್ಯಾಯಾಲಯದ ಮೆಟ್ಟಿಲ್ಲೇರುತ್ತೇವೆಂದು ಎಎಪಿ ಪಕ್ಷದ ಮುಖಂಡರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಜೊತೆಗೆ ಕಳೆದ ೫ ವರ್ಷದಿಂದ ನಗರದ ರಸ್ತೆಗಳ ಅಭಿವೃದ್ಧಿಗೆ ಖರ್ಚು ಮಾಡಿರುವ ೨೦ ಸಾವಿರ ಕೋಟಿ ರೂಪಾಯಿಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಸಿಎಂ ಬೊಮ್ಮಾಯಿ ಸರ್ಕಾರವನ್ನು ಆಗ್ರಹಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ, ನಗರ ಅಧ್ಯಕ್ಷ ಮೋಹನ್ ದಾಸರಿ ಸೇರಿದಂತೆ ಆನಂದ್ ವಾಸುದೇವನ್, ಜಗದೀಶ್ ಬಾಬು, ಪಾಲ್, ಪಕ್ಷದ ಕಾರ್ಯಕರ್ತರು ಹಾಜರಿದ್ದರು.