ಬೆಂಗಳೂರು, ಫೆ. 29: ಸರ್, ವಿಶ್ವದಲ್ಲೇ ಭಾರೀ ಆತಂಕ ಮೂಡಿಸುತ್ತಿರುವ ಕೊರೋನಾ ವೈರಸ್ ಇದೀಗ ಕರ್ನಾಟಕದ ಜನರನ್ನೂ ನಿದ್ದೆಗೆಡುವಂತೆ ಮಾಡಿದೆ. ಜನರು ಕೊರೋನಾ ಫೋಬಿಯಾಕ್ಕೆ ಒಳಗಾಗಿ ಆರೋಗ್ಯ ಇಲಾಖೆಯ ಸಹಾಯವಾಣಿಗೆ ಕರೆ ಮಾಡುತ್ತಿದ್ದಾರೆ.
ಹೌದು. ಸಾರ್… ನಂಗೆ ಎರಡು ದಿನದಿಂದ ಶೀತ, ಜ್ವರ, ಕೆಮ್ಮು. ಇದೆಲ್ಲ ಕೊರೋನಾ ವೈರಸ್ ಲಕ್ಷಣಗಳು ಎನ್ನಲಾಗುತ್ತಿದೆ. ನನಗೆ ಕೊರೋನಾ ಇದೆಯಾ ಎಂದು ಆರೋಗ್ಯ ಇಲಾಖೆಯ ಸಹಾಯವಾಣಿಗೆ ಕರೆಗಳ ಮೇಲೆ ಕರೆಗಳು ಬರ್ತಿವೆ.
ಸಹಾಯವಾಣಿಗೆ ಇದೂವರೆಗೆ ಆರೂವರೆ ಸಾವಿರ ಕರೆ ಬಂದಿದೆ. 108 ಸಹಾಯವಾಣಿ ಸಿಬ್ಬಂದಿಗೆ ಈಗ ಕೊರೋನಾ ಬಗ್ಗೆ ಮಾಹಿತಿ ಕೊಡೋದೆ ಕೆಲಸವಾಗಿದೆ.
ಕರ್ನಾಟಕದಲ್ಲಿ ಯಾವುದೇ ಕೊರೋನಾ ಕೇಸ್ ಪತ್ತೆಯಾಗಿಲ್ಲ. ಆದರೂ ಜನರಿಗೆ ಇದರ ಭೀತಿ ಹೆಚ್ಚಾಗಿದೆ. ಹೀಗಾಗಿ ಕೊರೋನಾ ಮಾಹಿತಿಗಾಗಿ ಜನ ಸಹಾಯವಾಣಿ ಮೊರೆ ಹೋಗುತ್ತಿದ್ದಾರೆ. ಬೇರೆ ದೇಶಗಳಿಗೆ ಹೋಗುವವರು ಕೂಡ ಅಲ್ಲಿಗೆ ಹೋಗಬಹುದಾ? ಯಾವ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಸಹಾಯವಾಣಿಗೆ ಕರೆ ಮಾಡುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.