ಶಹಾಪುರ : ವಡಗೇರಾ ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ಪ್ರೇಮ ವೈಫಲ್ಯತೆಯಿಂದ ಪ್ರೇಮಿಗಳಿಬ್ಬರು ಮನನೊಂದು ಸೋಮವಾರ ರಾತ್ರಿ ನೇಣಿಗೆ ಶರಣಾದ ಘಟನೆ ನಡೆದಿದೆ.
ಶರಣಬಸವ ಮೈಲಾರಪ್ಪ (22) ಶೇಖಮ್ಮ ದೇವಿಂದ್ರಪ್ಪ (18) ಆತ್ಮಹತ್ಯೆ ಶರಣಾದರು ಕಳೆದ ಒಂದು ವರ್ಷದಿಂದಲೂ ಪರಸ್ಪರ ಪ್ರೇಮಿಸುತ್ತಿದ್ದ ಇವರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಯಾದಗಿರಿ ನಗರದ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಯುವತಿ ಪಾಸು ಮಾಡಿದ್ದಳು. ಬಿ.ಎ ಪದವೀಧರ ಯುವಕ ಕಾಲೇಜು ಇಲ್ಲದ ಕಾರಣ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿದ್ದ. ಇನ್ನೇನು ಕಾಲೇಜು ಪ್ರಾರಂಭಗೊಳ್ಳುತ್ತಿರುವಾಗ ಯುವಕ ಶರಣಬಸವ ಮರಳಿ ಗ್ರಾಮಕ್ಕೆ ಬಂದಿದ್ದ. ಅಲ್ಲದೆ ಯುವತಿಯ ಜೊತೆ ಮಾತುಕತೆ ಮುಂದುವರೆಸಿ ಮದುವೆ ಕುರಿತು ಪ್ರಸ್ತಾಪ ಸಹ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
ಸೋಮವಾರ ಬೆಂಗಳೂರಿನಿಂದ ಯುವಕ ತನ್ನ ಮನೆಯ ದೊಡ್ಡಮ್ಮಳ ಮನೆಯಲ್ಲಿ ಬಂದು ನೆಲೆಸಿದ್ದ. ರಾತ್ರಿ ಸಮಯದಲ್ಲಿ ಯುವತಿಯನ್ನು ಮನೆಗೆ ಕರೆಯಿಸಿಕೊಂಡು ಇಬ್ಬರು ಮನೆಯಲ್ಲಿ ಇದ್ದರು. ಬೆಳಿಗ್ಗೆ ಮನೆಯ ಬಾಗಿಲು ತೆರೆಯಲು ಹೋದಾಗ ಇಬ್ಬರು ನೇಣಿಗೆ ಶರಣಾಗಿದ್ದರು.
ಈ ಕುರಿತು ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೋನಾವಣೆ, ಡಿವೈಎಸ್ಪಿ ವೆಂಕಟೇಶ ಉಗಿಬಂಡಿ, ಶಹಾಪುರ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಚೆನ್ನಯ್ಯ ಸಿ.ಹೀರೇಮಠ ಭೇಟಿ ನೀಡಿದರು.