ಚಾಮರಾಜನಗರ : ಚಾಮರಾಜನಗರದ ಯಡಬೆಟ್ಟ ಬಳಿ ಇರುವ ಸರ್ಕಾರಿ ಮೆಡಿಕಲ್ ಕಾಲೇಜ್ ಕ್ಯಾಂಪಸ್ನಲ್ಲಿ ಚಿರತೆ ಓಡಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದನ್ನು ನೋಡಿದ ಜನರು ಬೆಚ್ಚಿ ಬಿದ್ದಿದ್ದರು. ಸುತ್ತಲಿನ ಪ್ರದೇಶದವರು ಯಾರೂ ಬಾಗಿಲು ತೆರೆದಿಡದಂತೆ ಆದೇಶವನ್ನೂ ಹೊರಡಿಸಲಾಗಿತ್ತು.
ಈಗ ಮತ್ತದೇ ಚಿತರೆ ಸೀದಾ ಕಾಲೇಜಿನ ಕ್ಯಾಂಪಸ್ ಒಳಗೆ ನುಗ್ಗಿದೆ. ಕಿಟಕಿಯ ಮೂಲಕ ಒಳನುಗ್ಗಲು ಚಿರತೆ ಪ್ರಯತ್ನಿಸಿದೆ. ಇದರ ಫೋಟೋವನ್ನು ಕಾಲೇಜು ವಿದ್ಯಾರ್ಥಿಯೊಬ್ಬ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾನೆ.
ಈ ಚಿರತೆಯನ್ನು ಹಿಡಿಯದೇ ಹಾಗೆಯೇ ಬಿಟ್ಟರೆ ಜನ ಜಾನುವಾರುಗಳ ಪ್ರಾಣಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಇದು ಆಹಾರ ಹುಡುಕಿಕೊಂಡು ಬರುತ್ತಿರಬಹುದು. ಆದ್ದರಿಂದ ಜನರ ಪ್ರಾಣವನ್ನೂ ತೆಗೆಯಬಹುದು ಎಂಬ ಆತಂಕ ಎಲ್ಲೆಡೆ ಮನೆಮಾಡಿದೆ. ಇದೇ ಕಾರಣಕ್ಕೆ ಕೂಡಲೇ ಚಿರತೆಯನ್ನು ಸೆರೆ ಹಿಡಿಯುವಂತೆ ವೈದ್ಯಕೀಯ ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ ಹಾಗೂ ಸಾರ್ವಜನಿಕರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.