ಧೂಳಿಗೆ ಸಮನಿಲ್ಲದವರು ಟೀಕೆ ಮಾಡುತ್ತಿದ್ದಾರೆ

ಧೂಳಿಗೆ ಸಮನಿಲ್ಲದವರು ಟೀಕೆ ಮಾಡುತ್ತಿದ್ದಾರೆ

ಮೈಸೂರು-ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಧೂಳಿಗೂ ಸಮನಾಗಿಲ್ಲದವರು ಯಡಿಯೂರಪ್ಪ ಅವರನ್ನು ದಿನ ಬೆಳಗಾದರೆ ಟೀಕಿಸುತ್ತಿದ್ದಾರೆ. ನಮ್ಮಿಂದ ಸರ್ಕಾರ ಬಂತು, ನಮ್ಮಿಂದ ಸರ್ಕಾರ ಬಂತು ಎಂದು ಪದೇ ಪದೇ ಕೆಲವರು ಹೇಳುತ್ತಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಮೈಸೂರಿನ ಸುತ್ತೂರು ಮಠದಲ್ಲಿ ಮಾತನಾಡಿದ ಅವರು ಯಡಿಯೂರಪ್ಪ ವಿರುದ್ಧ ಹೇಳಿಕೆ ನಿಡುತ್ತಿರುವ ಶಾಸಕರ ಬಗ್ಗೆ ಗರಂ ಆದರು.
ಸ್ವಲ್ಪನಾದರೂ ಕಾಮನ್ ಸೆನ್ಸ್ ಇರಬೇಕು. ಇವರು ಯಾರನ್ನೂ ನಂಬಿಕೊಂಡು ನಾವು ಸರ್ಕಾರ ಮಾಡಿಲ್ಲ. ಇವರಿಗೆ ಯಡಿಯೂರಪ್ಪ ಬಗ್ಗೆ ಅಸಮಧಾನವಿದ್ದರೆ ಶಾಸಕಾಂಗ ಸಭೆಯಲ್ಲಿ ಮಾತನಾಡಲಿ. ಅದನ್ನು ಹಾದಿ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಅವರು ಯಾರಿದಂದಲೂ ಈ ಸರ್ಕಾರ ಬಂದಿಲ್ಲ. ಯಡಿಯೂರಪ್ಪ ನಾಯಕತ್ವದಲ್ಲಿ 104 ಶಾಸಕರು ಗೆದ್ದಿದ್ದರು. ಜೆಡಿಎಸ್ ಕಾಂಗ್ರೆಸ್ ನ ನಾವು 17 ಜನ ಅವರ ಜೊತೆ ಬಂದೆವು. ಈಗ ಸರ್ಕಾರವಾಗಿದೆ. ಯಡಿಯೂರಪ್ಪನ ನೇತೃತ್ವದಲ್ಲಿ 104 ಜನ ಗೆಲ್ಲದೆ ಇದ್ದಿದ್ದರೆ ಸರ್ಕಾರ ಮಾಡಲು ಸಾಧ್ಯವಿತ್ತೆ ಎಂದು ಬಿಎಸ್ ವೈ ವಿರೋಧಿಗಳ ವಿರುದ್ಧ ಸಚಿವರು ಕಿಡಿಕಾರಿದರು.
ಇವತ್ತು ಯಡಿಯೂರಪ್ಪನ ಬಗ್ಗೆ ಮಾತನಾಡುವ ಇವರು ಯಾಕೆ ಚುನಾವಣೆಯಲ್ಲಿ ಸೋತರು. ಒಂದು ಬಾರಿ ಸರಿ, ಎರಡು ಬಾರಿ ಸರಿ. ಪ್ರತಿ ದಿನವೂ ಇವರದ್ದು ಯಡಿಯೂರಪ್ಪರನ್ನು ಟೀಕೆ ಮಾಡುವುದೇ ಆಗಿದೆ. ಯಡಿಯೂರಪ್ಪನವರ ಪರಿಶ್ರಮ, ನಾಯಕತ್ವ ಎಂತದ್ದು ಎನ್ನುವುದನ್ನು ಅರಿತುಕೊಂಡು ಮಾತನಾಡಲಿ. ಯಡಿಯೂರಪ್ಪನವರ ಸಮಕ್ಕೆ ಇರುವವರು ಮಾತನಾಡಿದರೆ ಅದಕ್ಕೊಂದು ಬೆಲೆ ಇರುತ್ತದೆ ಎಂದು ಹೆಸರು ಹೇಳದೆ ಸಿ ಪಿ ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.

Related