ಕಾರವಾರ : ರಾಜ್ಯದ ಆದೇಶದಂತೆ ಕೆಲವು ಮುನ್ನೆಚ್ಚರಿಕೆ ಕ್ರಮಗಳ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಸ್ ಸಂಚಾರ ಆರಂಭವಾಯಿತು. ಸುಮಾರು 58 ದಿನಗಳ ನಂತರ ಬಸ್ ಸಂಚಾರ ಪುನರಾರಂಭವಾದ ಹಿನ್ನೆಲೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಮೊದಲು ಬಸ್ ತೆರಳುವ ಮುನ್ನ ಚಪ್ಪಾಳೆ ತಟ್ಟಿ ಶುಭ ಹಾರೈಸಿದರು.
ಕಾರವಾರದಿಂದ ಹುಬ್ಬಳ್ಳಿಗೆ ಬೆಳಗ್ಗೆ 9 ಗಂಟೆಗೆ ಮೊದಲ ಬಸ್ ಸಂಚಾರ ಆರಂಭಿಸಿತು. ಬಸ್ ಪ್ರಯಾಣ ಆರಂಭಿಸುವ ಮುನ್ನ ಪ್ರತಿಯೊಬ್ಬ ಪ್ರಯಾಣಿಕರ ಮಾಹಿತಿಯನ್ನು ಪಡೆದುಕೊಂಡು ಅವರ ದೇಹದ ತಾಪಮಾನ ಪರಿಶೀಲಿಸಲಾಯಿತು. ಅಲ್ಲದೇ ಪ್ರತಿ ಬಸ್ನಲ್ಲಿ 30 ಮಂದಿ ಪ್ರಯಾಣಿಕರಿಗಷ್ಟೇ ಅವಕಾಶ ನೀಡಲಾಯಿತು. ಬಸ್ ಸಂಚಾರ ಆರಂಭವಾದ ಹಿನ್ನೆಲೆಯಲ್ಲಿ ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಹುಬ್ಬಳ್ಳಿಗೆ ತೆರಳಲು ಸುಮಾರು 200 ಕ್ಕೂ ಹೆಚ್ಚು ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು.
ಕಂಟೊನ್ಮೆಂಟ್ ಪ್ರದೇಶವಾದ ಭಟ್ಕಳ ಹೊರತುಪಡಿಸಿ ಜಿಲ್ಲೆಯ ಎಲ್ಲಾ ತಾಲೂಕು ಭಾಗಗಳಿಗೆ ಬಸ್ ಸಂಚಾರ ಆರಂಭಿಸಲಾಗಿದೆ. ಇನ್ನೂ ದೂರದ ಬೆಂಗಳೂರು, ಮೈಸೂರಿಗೆ ತೆರಳಲು 30 ಮಂದಿ ಪ್ರಯಾಣಿಕರು ಬಂದಲ್ಲಿ ಮಾತ್ರ ಬಸ್ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ಅವರು ಕನಿಷ್ಠ ಒಂದು ದಿನ ಮೊದಲು ಟಿಕೆಟ್ ಬುಕಿಂಗ್ ಮಾಡಿಕೊಳ್ಳಬೇಕು ಎಂದು ಕೆ ಎಸ್ ಆರ್ ಟಿ ಅಧಿಕಾರಿಗಳು ಮಾಹಿತಿ ನೀಡಿದರು.