ತಾಂಡಾ ಅಭಿವೃದ್ಧಿಗೆ ಬಿಜೆಪಿಯೇ ಕಾರಣ: ಬೊಮ್ಮಾಯಿ

  • In State
  • May 2, 2024
  • 94 Views
ತಾಂಡಾ ಅಭಿವೃದ್ಧಿಗೆ ಬಿಜೆಪಿಯೇ ಕಾರಣ: ಬೊಮ್ಮಾಯಿ

ಹಾವೇರಿ: ಲಂಬಾಣಿ ತಾಂಡಾಗಳ ಅಭಿವೃದ್ದಿಗೆ ಬಿಜೆಪಿ ಕಾರ‌ಣ. ಯಡಿಯೂರಪ್ಪ ಸಿಎಂ ಆಗಿದ್ದಾಗ ತಾಂಡಾ ಅಭಿವೃದ್ಧಿ ನಿಗಮ ಮಾಡಿದ್ದೇವೆ‌. ನಾವು ಲಂಬಾಣಿ ಸಮುದಾಯದ ಮೀಸಲಾತಿಯನ್ನು 4.5 ಕ್ಕೆ ಹೆಚ್ಚಿಗೆ ಮಾಡಿದ್ದೇವೆ. ಕಾಂಗ್ರೆಸ್ ಅದನ್ನು 3% ಕ್ಕೆ ಇಳಿಸಿದೆ‌. ಈ ಬಗ್ಗೆ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿಂದು ಬಂಜಾರ ಸಮುದಾಯದ ಕೃಷ್ಣಾಪುರ ಮಠದ ಆವರಣದಲ್ಲಿ ಲಂಬಾಣಿ ಸಮುದಾಯದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ತಾಂಡಾಗಳು  ಕಂದಾಯ ಗ್ರಾಮಗಳಾಗಿ ಪರಿವರ್ತನೆ ಆಗಬೇಕು. ಕೇಂದ್ರ ರಾಜ್ಯದ ಎಲ್ಲ ಯೋಜನೆಗಳು ತಾಂಡಾಗಳಿಗೆ ಬರಬೇಕು ಇದು ನನ್ನ ಬದ್ದತೆ. ನಾನು ಬಂಜಾರ ಸ್ವಾಮೀಜಿ ಶ್ರೀ ಕುಮಾರ ಮಹಾರಾಜರ ಆಶೀರ್ವಾದ ಪಡೆದಿದ್ದೇನೆ. ಅವರು ಸಮಾಜದ ಅಭಿವೃದ್ಧಿ ಆಗಬೇಕು ಅಂತ ಹೇಳಿದ್ದಾರೆ. ನಾನು ಈ ಸಮುದಾಯದ ಸೋದರನಾಗಿ ಜೊತೆಯಲ್ಲಿರುತ್ತೇನೆ. ವಿಶೇಷವಾಗಿ ತಾಯಂದಿರು ಮುಖ್ಯವಾಹಿನಿಗೆ ಬರಬೇಕು. ನಿಮ್ಮ ಕೌಶಲ್ಯವನ್ನು ವಿಶ್ವಕ್ಕೆ ಪರಿಚಯಿಸಿ, ವಿಶೇಷ ಕಾರ್ಯಕ್ರಮ ರೂಪಿಸಿ ನಿಮ್ಮ ಆದಾಯ ಹೆಚ್ಚಳ ಮಾಡುವ ಎಲ್ಲ ಪ್ರಯತ್ನ ಮಾಡುತ್ತೇನೆ. ನಿಮ್ಮ ಸಹೋದರನಾಗಿ ಲೋಕಸಭೆಯಲ್ಲಿ ಧ್ವನಿ ಎತ್ತುತ್ತೇನೆ ಎಂದು ಹೇಳಿದರು.

ಇನ್ನು ಸಮಾವೇಶಕ್ಕೂ ಮುನ್ನ ಬಂಜಾರ ಸಮುದಾಯದ ಸ್ವಾಮೀಜಿ ಮಹಾನ್ ತಪಸ್ವಿ ಡಾ. ಶ್ರೀ ಕುಮಾರ ಮಹಾರಾಜರ ಆಶೀರ್ವಾದ ಪಡೆದರು.

ಇದನ್ನೂ ಓದಿ: ಲಂಬಾಣಿ ಸಮುದಾಯದ ಸೋದರನಾಗಿ ನಿಮ್ಮ ಜೊತೆಗಿರುವೆ: ಬೊಮ್ಮಾಯಿ

ಸಮಾವೇಶದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಬಸವರಾಜ ನಾಯಕ್ , ಹಾವೇರಿ ಬಿಜೆಪಿ ಮುಖಂಡ ಗವಿಸಿದ್ದಪ್ಪ,  ಶಿವಣ್ಣ ಲಮಾಣಿ, ಹನುಮಂತಪ್ಪ ಲಮಾಣಿ, ಮಲ್ಲೇಶಪ್ಪ ಲಮಾಣಿ, ರಮೇಶ ಲಮಾಣಿ, ಪುಂಡಲಿಕ್ ಲಮಾಣಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಲಲಿತಾ ಲಮಾಣಿ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

 

Related