ಮಾದಪ್ಪನ ಹಾಡಿಗೆ ವಿಜಯನಗರ ಉಘೇ

ಮಾದಪ್ಪನ ಹಾಡಿಗೆ ವಿಜಯನಗರ ಉಘೇ

ವಿಜಯನಗರ : ಅದು ಮಧ್ಯರಾತ್ರಿಯ ಸಮಯ. ಆದರೆ, ಅಲ್ಲಿದ್ದ ಯಾರಿಗೂ ಮನೆಗೆ ಹೋಗಬೇಕೆಂಬ ಮನಸ್ಸು ಇರಲಿಲ್ಲ. ಜಾನಪದ ಗೀತೆ ಗಾಯನದ ಮೋಡಿ, ಸಂಗೀತ ವಾದ್ಯಗಳ ತಾಳ ಅವರನ್ನು ಅಲ್ಲಿ ಕಟ್ಟಿ ಹಾಕಿತ್ತು.

ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭದ ನಿಮಿತ್ತ ಶನಿವಾರ ರಾತ್ರಿ 10 ಗಂಟೆಯ ನಂತರ ಆರಂಭಗೊಂಡ ಸಂಗೀತ ರಸಮಂಜರಿ ಕಾರ್ಯಕ್ರಮ ತಡರಾತ್ರಿ ಒಂದು ಗಂಟೆಯವರೆಗೆ ನಡೆಯಿತು.

ಗಾಯಕಿ ಎಂ.ಡಿ.ಪಲ್ಲವಿ ಅವರು, ದೀಪವು ನಿನ್ನದೆ, ಗಾಳಿಯು ನಿನ್ನದೆ, ಎದೆ ತುಂಬಿ ಹಾಡಿದೆನು ಭಾವಗೀತೆಗಳು ಜನರನ್ನು ಬೇರೊಂದು ಲೋಕಕ್ಕೆ ಕರೆದೊಯ್ದಿತ್ತು. ಗಾಯಕಿ ಶಹನಾಜ್ ಅಕ್ತರ್, ದೇಶಭಕ್ತಿ ಗೀತೆಗಳು ಜನರನ್ನು ತಲೆ ದೂಗುವಂತೆ ಮಾಡಿತು.

ಗಾಯಕಿ ಸವಿತಾ ಮತ್ತು ಬಸವಂತ್ ಪಾಟೀಲ್ ಹಾಡಿದ ಮಾದಪ್ಪ ಹಾಗೂ ಚಾಮುಂಡಿ ದೇವಿ ಕುರಿತ ಜಾನಪದ ಗೀತೆಗಳು ಎಲ್ಲರನ್ನೂ ರಂಜಿಸಿದವು. ಇದಾದ ಬಳಿಕ ವೇದಿಕೆಗೆ ಬಂದ ಗಾಯಕಿ ಕಲಾವತಿ ದಯಾನಂದ ಅವರು ಏರು ದನಿಯಲ್ಲಿ ಜಿ.ಎಸ್.ಶಿವರುದ್ರಪ್ಪನವರ ಕಾಣದ ಕಡಲಿಗೆ ಹಂಬಲಿಸಿದೆ ಮನ, ಸಂತ ಶಿಶುನಾಳ ಶರೀಫರ ಸೋರುತಿಹುದು ಮನೆಯ ಮಾಳಿಗಿ ಹಾಗೂ ಯಾಕೆ ಬಡದಾಡ್ತಿ ತಮ್ಮಾ ಹಾಡು ಅಲ್ಲಿದ್ದವರು ಹುಚ್ಚೆದ್ದು ಕುಣಿಸುವಂತೆ ಮಾಡಿತು.
ಗಾಯಕಿ ಅನನ್ಯ ಭಟ್, ಸೋಜುಗದ ಸೂಜುಮಲ್ಲಿಗೆ ಹಾಡು ಪ್ರೇಕ್ಷಕರನ್ನು ಭಕ್ತಿಪರವಶವಾಗುವಂತೆ ಮಾಡಿದರೆ, ಮಾದಪ್ಪನ ಅಣ್ಣ ಮಾದಯ್ಯ, ಕಿರುಗಣ್ಣ ಮಾದಯ್ಯ ಹಾಡಿಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿದರು.

 

Related