ತಿಪಟೂರು : ಕೋವಿಡ್ 3ನೇ ಅಲೆ ಎದುರಿಸಲು ಸರ್ಕಾರ ಸನ್ನದ್ದವಾಗಿದ್ದು, ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಅನುಸರಿಸುವ ಮೂಲಕ ಸಹಕಾರ ನೀಡಬೇಕೆಂದು ಶಾಸಕ ಬಿ.ಸಿ. ನಾಗೇಶ್ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ 1.15ಕೋಟಿ ರೂ ವೆಚ್ಚದ ನೂತನ ಆಕ್ಸಿಜನ್ ಪ್ಲಾಂಟ್ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ ನಿರ್ವಹಣೆಗೆ ಸಾಕಷ್ಟು ಪರಿಶ್ರಮಪಟ್ಟಿವೆ ಎಂದರು.
ಕೋವಿಡ್ ಮೊದಲ ಅಲೆಯಲ್ಲಿ ಮಾಸ್ಕ್ ಮತ್ತು ಪಿಪಿಇ ಕಿಟ್ ತಯಾರಿಕಾ ಘಟಕಗಳು ದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಇದ್ದ ಕಾರಣ ಸಮಸ್ಯೆ ಎದುರಿಸಬೇಕಾಯಿತು. ಆದರೆ ಕೇಂದ್ರ ಸರ್ಕಾರ ಎಲ್ಲಾ ತಾಲೂಕು ಕೇಂದ್ರಗಳಿಗೂ ಆಕ್ಸಿಜನ್ ಮುಂಜೂರು ಮಾಡಿ ಅನುದಾನ ನೀಡಿತು. ತಾಲೂಕಿಗೆ 390 ಎಂಎಲ್ಪಿ ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ಮಂಜೂರಾತಿ ದೊರೆತಿತ್ತು.
ತಿಪಟೂರು ತಾಲೂಕು ಆಸ್ಪತ್ರೆಯಲ್ಲಿ ಅಕ್ಕಪಕ್ಕದ ತಾಲೂಕುಗಳು ಸೇರಿದಂತೆ ಬೇರೆ ಬೇರೆ ಭಾಗದಿಂದ ಹೆಚ್ಚು ಜನ ರೋಗಿಗಳು ಬರುವುದರಿಂದ ಹೆಚ್ಚು ಸಾಮರ್ಥ್ಯದ ಅವಶ್ಯಕತೆ ಇರುವ ಕಾರಣ 1.15 ಕೋಟಿ ರೂ ವೆಚ್ಚದ 500 ಎಂಎಲ್ಪಿ ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ಮಂಜೂರಾಗಿದೆ. ತಜ್ಞರ ಅಭಿಪ್ರಾಯದಂತೆ ದೇಶದಲ್ಲಿ ಕೋವಿಡ್ ಮೂರನೇ ಅಲೆ ಬರುವ ಮುನ್ಸೂಚನೆ ಇದ್ದು ತಾಲೂಕಿನಲ್ಲಿ ಕೋವಿಡ್ ನಿರ್ವಹಣೆಗೆ ನಮ್ಮ ವೈದ್ಯಕೀಯ ತಂಡ ಸನ್ನದ್ದವಾಗಿದ್ದು ಸೂಕ್ತ ಮುಂಜಾಗ್ರತೆ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರ ಎಷ್ಟೇ ಜಾಗೃತ ಕ್ರಮಗಳನ್ನ ಕೈಗೊಂಡರೂ ಸಾರ್ವಜನಿಕರ ಸಹಕಾರ ಅಗತ್ಯ. ಸಾರ್ವಜನಿಕರು ಕೋವಿಡ್ ಬಗ್ಗೆ ನಿರ್ಲಕ್ಷö್ಯ ಧೋರಣೆ ಅನುಸರಿಸದೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಆಡಳಿತದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚಂದ್ರಶೇಖರ್, ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್, ಶಿವಕುಮಾರ್, ವೈದ್ಯಾಧಿಕಾರಿಗಳಾದ ಡಾ. ರವಿ, ಡಾ. ರಕ್ಷಿತ್ಗೌಡ, ಡಾ. ವಿಜಯಕುಮಾರ್, ಪೌರಾಯುಕ್ತ ಉಮಾಕಾಂತ್ ಮತ್ತಿತರರಿದ್ದರು.