ಮೈಸೂರು: ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಯಾದಗಿದ್ದಾಗ ಕರ್ನಾಟಕ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಪ್ರಾರಂಭ ಮಾಡಿದ್ದರು.
ಇಂದಿರಾ ಕ್ಯಾಂಟೀನ್ ವ್ಯವಸ್ಥೆಯಿಂದ ಬಡವರ ಪಾಲಿಗೆ ಒಂದು ಹೊತ್ತಿನ ಹಸಿವನ್ನು ನೀಗಿಸುವ ಘಟಕವಾಗಿದ್ದು, ಸಾಮಾನ್ಯವಾಗಿ ಆಟೋ ಚಾಲಕರು, ಕ್ಯಾಬ್ ಚಾಲಕರು ಇನ್ನಿತರರು ಸೇರಿ ಒಂದು ಹೊತ್ತಿನ ಹಸಿವನ್ನು ತುಂಬಿಸಿಕೊಳ್ಳುತ್ತಾರೆ.
ಈ ಬಡವರ ಪಾಲಿಗೆ ಹೊಟ್ಟೆ ತುಂಬಿಸುವ ತಾಣವಾಗಿದ್ದ ಇಂದಿರಾ ಕ್ಯಾಂಟೀನ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರಿನಲ್ಲಿ ದುರ್ವ್ಯವಸ್ಥೆ ಕಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಸಹ ಮುಖ್ಯಮಂತ್ರಿಯವರು ಇಂದಿರಾ ಕ್ಯಾಂಟೀನ್ ಬಗ್ಗೆ ಗಮನಹರಿಸುತ್ತಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ ವಿಫಲತೆಯನ್ನು ಕಂಡಿದೆ. ಮೈಸೂರಿನ ಬನ್ನಿಮಂಟಪದ ಜೋಡಿ ತೆಂಗಿನಮರ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಕಾರ್ಯ ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿದ್ದು, ಈ ಇಂದಿರಾ ಕ್ಯಾಂಟೀನ್ ಅನ್ನು ಯಾರೂ ಹೇಳುವವರು ಕೇಳುವವರೇ ಇಲ್ಲದಂತಾಗಿದೆ.
ಇದೀಗ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದರೂ ಸಹ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಲ್ಲೊಂದಾದ ಇಂದಿರಾ ಕ್ಯಾಂಟೀನ್ ಅನ್ನು ಮತ್ತೆ ತೆರೆಯಲು ನಿರಾಸಕ್ತಿ ತೋರಿದ್ದು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾರ್ವಜನಿಕರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ಅನ್ನು ನಿರ್ಮಾಣ ಮಾಡಿದ್ದರೂ ಸಹ ಜನರಿಗೆ ಉಪಯೋಗವಿಲ್ಲದೆ ಪಾಳು ಬಿದ್ದಂತಾಗಿದೆ.
ಇನ್ನು ಮೈಸೂರಿನ ಅನೇಕ ಭಾಗಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿದ್ದು, ಇಲಿ, ಹೆಗ್ಗಣಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್ ಪ್ರತಿನಿಧಿಸುವ ಕ್ಷೇತ್ರದಲ್ಲೇ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಸ್ಥಗಿತಗೊಂಡಿದ್ದು, ಕ್ಯಾಂಟೀನ್ ಸುತ್ತಲೂ ಗಿಡ ಗಂಟೆ ಬಳ್ಳಿ, ಪೊದೆಗಳು ಬೆಳೆದು ನಿಂತಿದೆ.
ಸಾರ್ವಜನಿಕರು ದಿನನಿತ್ಯ ಓಡಾಡುವ ರಸ್ತೆಯಲ್ಲಿ ಇರುವ ಇಂದಿರಾ ಕ್ಯಾಂಟೀನ್ ಅನ್ನೇ ಸರಿ ಪಡಿಸಲಾಗದೆ ಜೀರ್ಣಾವಸ್ಥೆಗೆ ತಲುಪಿದೆಯೆಂದರೆ ಸರ್ಕಾರ ಅಥವಾ ಅಧಿಕಾರಿಗಳು ಈ ಇಂದಿರಾ ಕ್ಯಾಂಟೀನ್ ಎಷ್ಟರ ಮಟ್ಟಿಗೆ ಪ್ರಾಮುಖ್ಯತೆಯನ್ನು ನೀಡುತ್ತಿದೆ ಎನ್ನುವ ಪ್ರಶ್ನೆಯೂ ಇದೀಗ ಎದ್ದಿದೆ.