ಬೆಂಗಳೂರು, ಆಗಸ್ಟ್ 05: ಆತ್ಮನಿರ್ಭರ್ ಭಾರತ್ ನಿರ್ಮಾಣವಾಗಲು ಕೈಮಗ್ಗಗಳಲ್ಲಿ ಹೆಚ್ಚು ಉತ್ಪಾದನೆಯಾಗಬೇಕು. ನೇಕಾರರಿಗೆ ಅದರ ಲಾಭ ಮುಟ್ಟಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಿರುವ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಉದ್ಘಾಟಿಸಿ ಕೈಮಗ್ಗ ನೇಕಾರರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಕೈ ಮಗ್ಗ ಸ್ವಾವಲಂಬನೆಯ ಸಂಕೇತವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಕೈಮಗ್ಗ ಬಹಳ ಪ್ರಮುಖ ಪಾತ್ರ ವಹಿಸಿದೆ. ಕೈಮಗ್ಗ, ಚರಕ, ಇವೆಲ್ಲವೂ ಸ್ವಾತಂತ್ರ್ಯ ಹೋರಾಟಕ್ಕೆ ದೊಡ್ಡ ಪ್ರೋತ್ಸಾಹ ನೀಡಿದೆ. ಮಹಾತ್ಮಾ ಗಾಂಧೀಜಿಯವರು ನಮ್ಮ ಬಟ್ಟೆಗಳನ್ನು ನಾವೇ ತಯಾರು ಮಾಡಬೇಕೆಂದು ಕರೆ ನೀಡಿದರು. ಬ್ರಿಟಿಷರು ವ್ಯಾಪಾರ ಮಾಡಲು ಬಂದು ಬಟ್ಟೆ ಪ್ರಮುಖವಾಗಿತ್ತು. ಇಂಗ್ಲೆಂಡ್ ನ ಮಿಲ್ ಗಳಲ್ಲಿ ತಯಾರಾಗುವ ಬಟ್ಟೆಗೆ ಪ್ರತಿರೋಧವಾಗಿ ನಮ್ಮ ಕೈಯಿಂದ ನಮ್ಮ ಬಟ್ಟೆಗಳನ್ನು ನೇಯಬೇಕೆಂಬ ಗಾಂಧೀಯವರ ಕರೆಗೆ ಕೈಮಗ್ಗಕ್ಕೆ ಜನ ಕೈಜೋಡಿಸಿದರು. ಸ್ವಾತಂತ್ರ್ಯ ಹೋರಾಟದ ಪ್ರೇರಣೆ. ಇಂಥ ಕ್ಷೇತ್ರ ಅತಿ ಹೆಚ್ಚು ಉದ್ಯೋಗ ನೀಡುವ ಕ್ಷೇತ್ರ ಎಂದರು.