ನಾಡು, ನುಡಿಯ ಸೇವೆಗೆ ಅವಕಾಶ ನೀಡಿ

ನಾಡು, ನುಡಿಯ ಸೇವೆಗೆ ಅವಕಾಶ ನೀಡಿ

ಮಹಾಲಿಂಗಪುರ: ಕಳೆದ 25 ವರ್ಷದಿಂದ ಕನ್ನಡ ಸಾಹಿತ್ಯ, ಸಂಸ್ಕೃತಿ ಏಳ್ಗೆಗಾಗಿ ಅವಿರತವಾಗಿ ದುಡಿಯುತ್ತಾ, ಸಂದರ್ಭ ಬಂದಾಗ ಚಳುವಳಿ, ಹೋರಾಟಗಳ ಮೂಲಕ ಹಗಲಿರುಳೂ ಕನ್ನಡ ನಾಡು ನುಡಿಯ ಸೇವೆ ಮಾಡುತ್ತಾ ಬಂದಿದ್ದೇನೆ. ಈಗ ಬಾಗಲಕೋಟೆ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಜಿಲ್ಲೆಯ ಸಾಹಿತಿಗಳು, ಕಸಾಪ ಸದಸ್ಯರು ನನಗೆ ಮತ ನೀಡುವ ಮೂಲಕ ಆಶೀರ್ವದಿಸಬೇಕೆಂದು ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶಿವಾನಂದ ಶೆಲ್ಲಿಕೇರಿ ಹೇಳಿದರು.
ಪಟ್ಟಣದಲ್ಲಿ ಚುನಾವಣಾ ಪ್ರಚಾರ ನಡೆಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ನಾಡು ನುಡಿಯ ಸಾರ ಸತ್ವವನ್ನು, ಕಂಪನ್ನು ನಾಡಿನೆಲ್ಲೆಡೆ ಹಬ್ಬಿಸುವ ನಿಟ್ಟಿನಲ್ಲಿ ಜಿಲ್ಲೆಯ ಸಾಹಿತಿಗಳು, ಕಲಾವಿದರು, ವಿದ್ವಾಂಸರು, ಪತ್ರಕರ್ತರ ಸಹಕಾರದಿಂದ ನೂರಾರು ಕಾರ್ಯಕ್ರಮಗಳನ್ನು ನಡೆಸಿದ್ದೇನೆ. ನಿಮ್ಮ ಪ್ರೀತಿ ವಿಶ್ವಾಸದ ಫಲವಾಗಿ ಈ ಬಾರಿಯ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದರು.
ಹಿರಿಯ ಪತ್ರಕರ್ತ, ಸಾಹಿತಿ ಮಲ್ಲಿಕಾರ್ಜುನ ಹೆಗ್ಗಳಗಿ, ಪುರಸಭಾ ಮಾಜಿ ಅಧ್ಯಕ್ಷ ಜಿ.ಎಸ್.ಗೊಂಬಿ, ಶಿಕ್ಷಣ ಸಂಯೋಜಕ ಎಸ್.ಎಸ್.ಹಾದಿಮನಿ ಮಾತನಾಡಿ, ಕನ್ನಡ ನಾಡು ನುಡಿ, ನೆಲದ ಬಗ್ಗೆ ಅಪಾರ ಪ್ರೀತಿ, ಕಾಳಜಿ,ಅಭಿಮಾನ ಹೊಂದಿರುವ ಶಿವಾನಂದ ಶೆಲ್ಲಿಕೇರಿ ಅವರಿಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ ಎಂದರು.

Related