ಭಾರೀ ಮಳೆ; ಜನಜೀವನ ಅಸ್ತವ್ಯಸ್ತ

ಭಾರೀ ಮಳೆ; ಜನಜೀವನ ಅಸ್ತವ್ಯಸ್ತ

ಮುಂಡಗೋಡ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭಾರೀ ಅವಾಂತರ ಸೃಷ್ಟಿಯಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

ಗುರುವಾರ ಪಟ್ಟಣದ ಬಹುತೇಕ ಮುಖ್ಯ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿತ್ತು. ಬಂಕಾಪುರ ರಸ್ತೆ ಸಂಪೂರ್ಣ ಜಲಾವೃತವಾಗಿದ್ದರಿಂದ ವಾಹನ ಸವಾರರು ಸಾಕಷ್ಟು ಪರದಾಡಬೇಕಾಯಿತು.

ತಾಲೂಕಿನ ಶಿಡ್ಲಗುಂಡಿ ತಾತ್ಕಾಲಿಕ ಸಂಚಾರಕ್ಕಾಗಿ ನಿರ್ಮಾಣ ಮಾಡಲಾಗಿದ್ದ ಮಿನಿ ಸೇತುವೆ ಮೇಲೆ ನೀರು ಹರಿದು ಮುಂಡಗೋಡ-ಯಲ್ಲಾಪುರರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಹಾನಿ: ಪಾಳಾ ಹೋಬಳಿ ಕಾತೂರ ಗ್ರಾ.ಪಂ ಕಲ್ಲಳ್ಳಿ ಗ್ರಾಮದಲ್ಲಿ ರತ್ನಾದಾಸನ ಕೊಪ್ಪ ಅವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಅಲ್ಲದೇ ಅಲ್ಲಲ್ಲಿ ಹಳೆಯ ಮನೆಗಳಿಗೆ ಸಣ್ಣ ಪುಟ್ಟ ಹಾನಿಯಾಗಿದೆ. ನಿರಂತರವಾಗಿ ಸುರಿದ ಮಳೆಗೆ ಭತ್ತದ ಗದ್ದೆಗಳೆಲ್ಲ ಜಲಾವೃತಗೊಂಡಿದ್ದು, ರೈತರು ತೀವ್ರ ಸಂಕಷ್ಟಕೊಳಗಾಗಿದ್ದಾರೆ.

Related