ಬೆಂಗಳೂರು: ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಉಗ್ರರ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಕನ್ನಡಿಗ ಯೋಧ ಎಂ.ವಿ.ಪ್ರಾಂಜಲ್ ಶರೀರವನ್ನು ಸಕಲ ಸರ್ಕಾರಿ ಮತ್ತು ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.
ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಉಗ್ರರ ವಿರುದ್ಧದ ನಡೆದ ಕಾದಾಟದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥೀವ ಶರೀರವನ್ನು ದೆಹಲಿಯಿಂದ ಶುಕ್ರವಾರ ರಾತ್ರಿ ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಕರೆ ತರಲಾಗಿತ್ತು.
ಈ ವೇಳೆ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯಾತಿಗಣ್ಯರು ಅಂತಿಮ ನಮನದ ಬಳಿಕ ಬಳಿಕ ಸಕಲ ಸರಕಾರಿ ಗೌರವದೊಂದಿಗೆ ಪಾರ್ಥಿವ ಶರೀರವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿತ್ತು. ಜಿಗಣಿಯ ನಂದನವನ ಬಡಾವಣೆಯಲ್ಲಿರುವ ಪ್ರಾಂಜಲ್ ಮನೆಯ ಎದುರು ಶನಿವಾರ ಬೆಳಗ್ಗೆ 7ರಿಂದ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಕುಟುಂಬದವರು, ಸಂಬಂಧಿಕರಿಗೆ ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಅಂತಿಮ ಯಾತ್ರೆ ಸಾಗಲಿರುವ 30ಕಿ. ಮೀ. ರಸ್ತೆಯುದ್ದಕ್ಕೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು 3000 ಹೆಚ್ಚು ಜನ ಹುತಾತ್ಮ ಯೋಧ ಪ್ರಾಂಜಲ್ ಅಂತಿಮ ದರ್ಶನ ಪಡೆದರು.
ಇದೇ ಸಂದರ್ಭದಲ್ಲಿ ಮಾಜಿ ಸೈನಿಕರು ಹಾಗೂ ಉನ್ನತ ಅಧಿಕಾರಿಗಳು, ಗಣ್ಯರಿಂದ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
ಜಿಗಣಿ-ಬನ್ನೇರಘಟ್ಟ ಮಾರ್ಗದ ಕೊಪ್ಪ,ಕೋಳಿ ಫಾರಂ ಗೇಟ್ ಮೂಲಕ ನೈಸ್ ರಸ್ತೆಯಲ್ಲಿ ಸಾಗಿ ಕೂಡ್ಲು ಗೇಟ್ ಸೋಮುಸುಂದರ್ ಪಾಳ್ಯದ ವಿದ್ಯುತ್ ಚಿತಾಗಾರಕ್ಕೆ ಮೆರವಣಿಗೆ ನಡೆಸಲಾಯಿತು. ಸುತ್ತಮುತ್ತಲಿನ ಶಾಲಾ ಮಕ್ಕಳು ರಸ್ತೆಯುದ್ದಕ್ಕೂ ನಿಂತು ಪಾರ್ಥಿವ ಮೃತ ದೇಹಕ್ಕೆ ಹೂ ಎಸೆಯುವ ಮೂಲಕ ಅಂತಿಮ ನಮನ ಸಲ್ಲಿಸಿ ವಿಶೇಷ ಗೌರವ ಸಲ್ಲಿಸಿದರು.
ಮೆರವಣಿಗೆಯ ದಾರಿಯುದ್ದಕ್ಕೂ ಸೈನಿಕ್ ಅಮರ್ ರಹೇ ಘೋಷಣೆ ಕೂಗುತ್ತ ಮೃತ ದೇಹದ ಮೇಲೆ ಹೂ ಎಸೆದು ಗೌರವ ಸಲ್ಲಿಸಿದರು. ಬಳಿಕ ಕೂಡ್ಲು ಬಳಿಯ ಸೋಮಸುಂದರಪಾಳ್ಯದ ವಿದ್ಯುತ್ ಚಿತಾಗಾರದಲ್ಲಿ ಸೇನಾಗೌರವದೊಂದಿಗೆ ಬ್ರಾಹ್ಮಣ ಸಾಂಪ್ರದಾಯದಂತೆ ಪ್ರಾಂಜಲ್ ಅಂತ್ಯಕ್ರಿಯೆ ನೆರವೇರಿತು.
ಮಗನ ಅಗಲಿಕೆ ಬಗ್ಗೆ ಪ್ರತಿಕ್ರಿಯಿಸಿದ ಪ್ರಾಂಜಲ್ ತಂದೆ ವೆಂಕಟೇಶ್ 5 ದಿನದ ಹಿಂದೆ ಮಗ ಕರೆ ಮಾಡಿದ್ದ. ಪ್ರಾಂಜಲ್ ಇಂಟೆಲಿಜೆನ್ಸ್ ಕಾರ್ಯವೊಂದರ ಮೇಲೆ ನಿಯೋಜನೆಗೊಂಡಿದ್ದೇನೆ ಎಂದು ಹೇಳಿದ್ದ. ನೀವು ಕರೆ ಮಾಡಬೇಡಿ ನಾನೇ ಮೆಸೆಜ್ ಮಾಡುತ್ತೇನೆ ಅಥವಾ ಕರೆ ಮಾಡುತ್ತೇನೆ ಎಂದು ಹೇಳಿದ್ದ. ಆಲ್ ಓಕೆ ಎಂಬ ಸಂದೇಶ ಬರುತ್ತಿತ್ತು. ಆದರೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ಅರಿವಿರಲಿಲ್ಲ. ಆಲ್ ಓಕೆ ಎಂದು ಹೇಳುತ್ತಲೇ ಕೊನೆಯುಸಿರೆಳೆದಿದ್ದಾನೆ. 2 ವರ್ಷದ ಹಿಂದೆ ಬೆಂಗಳೂರಿನ ಅದಿತಿಯನ್ನು ಮದುವೆಯಾಗಿದ್ದ. ಒಬ್ಬ ಯೋಧನ ಪತ್ನಿಯಾಗಿ ಪತಿಗೆ ಸದಾ ನೈತಿಕ ಬೆಂಬಲ ನೀಡುತ್ತಿದ್ದಳು. ಪ್ರಾಂಜಲ್ ದೇಶಕ್ಕಾಗಿ ಪ್ರಾಣ ಬಿಟ್ಟಿದ್ದಾನೆ ಎಂಬ ತೃಪ್ತಿ ನನಗಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಮಾತನಾಡಿ ದೇಶ ರಕ್ಷಣೆಗೆ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ್ದಾರೆ, ಚಿಕ್ಕ ವಯಸ್ಸಿನಿಂದಲೂ ಮಿಲಿಟರಿಗೆ ಸೇರಬೇಕೆಂದು ಬಯಸಿದ್ದ ಪ್ರಾಂಜಲ್ ಅವರ ಸಾವು ಬಹಳ ದುಖಃ ತರಿಸಿದೆ, ಕುಟುಂಬದ ಒಬ್ಬನೇ ಮಗನನ್ನ ಕಳೆದು ಕೊಂಡಿದ್ದಾರೆ, ಅವರಿಗೆ ದುಖಃ ಭರಿಸುವ ಶಕ್ತಿ ನೀಡಲಿ ಅಂತ ಪ್ರಾರ್ಥಿಸುತ್ತೇನೆ, ಯೋಧಮೃತ ಪ್ರಾಂಜಲ್ ಕುಟುಂಬಕ್ಕೆ 50ಲಕ್ಷ ಪರಿಹಾರವನ್ನು ನೀಡಲಾಗುವುದು ಎಂದರು.
ವಿಧಾನ ಪಕ್ಷದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ದೇಶದ ರಕ್ಷಣೆಗಾಗಿ ಜಮ್ಮೂಕಾಶ್ಮೀದಲ್ಲಿ ಶೌರ್ಯ ಮತ್ತು ಸಾಹಸ ಪ್ರದರ್ಶಿಸಿಸುವ ಸಂದರ್ಭದಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ವೀರಯೋಧ ಪ್ರಾಂಜಲ್ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಮಹನೀಯರನ್ನು ಶಾಶ್ವತವಾಗಿ ಸ್ಮರಿಸುವ ಕೆಲಸವಾಗಬೇಕಿದೆ ಎಂದರು.
ಸ್ಥಳೀಯ ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ನಮ್ಮ ಕ್ಷೇತ್ರದ ವೀರಯೋಧ ಮರಣದಿಂದ ತೀವ್ರ ಸ್ವರೂಪ ಆಘಾತಕಾರಿಯಾಗಿದೆ ಎಂದು ಹೇಳಿದ ಅವರು ಮೃತರು ಕುಟುಂಬಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಕರ್ನಾಟಕದ ಅಧ್ಯಕ್ಷ ವಿಜಯೇಂದ್ರ ಅವರಿಂದ ಸಕಲ ನೆರವು ನೀಡಲಾಗುವುದು ಎಂದರು.
ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ ಮಾತನಾಡ ಬೆಳಿಗ್ಗೆ ಏಳು ಗಂಟೆಯಿಂದ ಹತ್ತುಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸ ಕೊಡಲಾಗಿತ್ತು. ತದನಂತರ ಸೇನೆ ಹಾಗೂ ರಾಜ್ಯ ಪೊಲೀಸರಿಂದ ಹುತಾತ್ಮ ವೀರ ಯೋಧ ಪ್ರಾಂಜಲ್ ಅವರಿಗೆ ಗೌರವ ರಕ್ಷೆಯನ್ನ ನೀಡಲಾಯಿತು. ಬಳಿಕ ಮತ್ತೊಂದು ಹಂತದ ವಿಧಿವಿಧಾನವನ್ನ ಕುಟುಂಬಸ್ಥರು ಪೂರೈಸಿದರು. ಪ್ರಾಂಜಲ್ ಪಾರ್ಥಿವ ಶರೀರವನ್ನ ಸೇನೆಯ ತೆರೆದ ವಾಹನದಲ್ಲಿ ಅಂತಿಮ ಯಾತ್ರೆಯ ಮೂಲಕ ಚಿತಾಗಾರದತ್ತ ಕೊಂಡೊಯ್ಯಲಾಯಿತು. ಕೊಪ್ಪ ಗ್ರಾಮದ ಸಮೀಪದ ನಂದನವನ ಬಡಾವಣೆಯಿಂದ ಜಿಗಣಿ, ಬನ್ನೇರುಘಟ್ಟ ಮಾರ್ಗವಾಗಿ ನೈಸ್ ರಸ್ತೆಯ ಮೂಲಕ ಕೂಡ್ಲು ಚಿತಾಗಾರಕ್ಕೆ ಕರೆತರಲಾಯಿತು. ಎಂದರು.
ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಇನ್ನೂ ಕುಡ್ಲು ಚಿತಾಗಾರದ ಬಳಿ ಅಂತಿಮ ವಿಧಿವಿಧಾನಗಳನ್ನ ಕುಟುಂಬಸ್ಥರು ನೆರವೇರಿಸಿದರು. ಸೇನೆಯ ವತಿಯಿಂದ ಕುಡ್ಲೂ ಚಿತಾಗಾರದ ಬಳಿ ಹುತಾತ್ಮ ಗೌರವ ರಕ್ಷೆಯನ್ನ ನೀಡಿ ವೀರ ಯೋಧ ಪ್ರಾಂಜಲ್ ಗೆ ಗೌರವ ಸಲ್ಲಿಸಲಾಯಿತು.