ದಸರಾ ಕ್ರೀಡಾ ಕೂಟ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು: ಸಚಿವ ಬಿ. ನಾಗೇಂದ್ರ

ದಸರಾ ಕ್ರೀಡಾ ಕೂಟ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು: ಸಚಿವ ಬಿ. ನಾಗೇಂದ್ರ

ಮೈಸೂರು: ದಸರಾ ಕ್ರೀಡಾ ಕೂಟವನ್ನು ಯಾವುದೇ ತೊಂದರೆಯಾಗದಂತೆ ಕ್ಪೀಡಾಪಟುಗಳಿಗೆ ಉತ್ತಮ ವ್ಯವಸ್ಧೆ ನೀಡುವುದರ ಮೂಲಕ ವ್ಯವಸ್ಧಿತವಾಗಿ ಆಯೋಜಿಸಲಾಗುವುದು ಎಂದು ಕ್ರೀಡಾ ಸಚಿವರಾದ ಬಿ.ನಾಗೇಂದ್ರ ಅವರು ತಿಳಿಸಿದರು.
ಹಳೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಕ್ರೀಡಾ ದಸರಾದಲ್ಲಿ ಯಾವುದಕ್ಕೂ ಕೊರತೆಯಾಗದೆ ವ್ಯವಸ್ಥಿತವಾಗಿ ಹಾಗೂ ಹಳೇ ವೈಭವ ಮರುಕರುಳಿಸುವಂತೆ ಯಶಸ್ವಿಯಾಗಿ ನಡೆಯಬೇಕು. ಕ್ರೀಡಾ ದಸರಾ ನಡೆಸಲು ಅವಶ್ಯವಿರುವ ಅನುದಾನ ಹಾಗೂ ಖರ್ಚುವೆಚ್ಚದ ಪೂರ್ಣ ಮಾಹಿತಿ ನೀಡುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ ಸೂಚನೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾಗಿರುವ ಹಿನ್ನಲೆ ಯಾವುದೇ ಲೋಪವಾಗದಂತೆ ಕ್ರೀಡಾ ದಸರಾ ಆಯೋಜನೆಯಾಗಬೇಕು. ಈ ಸಂಬಂಧ ಪೂರ್ವ ಸಿದ್ದತಾ ಪ್ರಕ್ರಿಯೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಶಕ್ತಿ ಯೋಜನೆ ಜಾರಿ ಹಿನ್ನಲೆ ಶೇ.೨೫ ರಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ನಿರಿಕ್ಷೆಯಿದ್ದು ಮುಂದಿನ ವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಕ್ರೀಡಾ ದಸರಾ ಕುರಿತು ಚರ್ಚಿಸಲಾಗುವುದು.
ಕಳೆದ ಬಾರಿಯ ದಸರೆ ವೇಳೆ ರಾಜ್ಯದ ವಿವಿಧೆಡೆಯಿಂದ ಬರುವ 5 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಉತ್ತಮ ವಸತಿ ವ್ಯವಸ್ಥೆ ಕಲ್ಪಿಸಲು ತೊಂದರೆಯಾಗಿದೆ. ಈ ಬಾರಿ ವ್ಯವಸ್ಥಿತವಾಗಿ ಕ್ರೀಡಾಕೂಟ ನಡೆಸಲು ಅವಧಿಗೂ ಮುನ್ನವೇ ಆಯೋಜನೆ ಮಾಡುವ ಆಲೋಚನೆಯಿದೆ’ ಎಂದು ಪ್ರಸ್ತಾಪಿಸಿದರು.
‘ಕ್ರೀಡಾಕೂಟದಲ್ಲಿ 27 ಗುಂಪು ಹಾಗೂ ವೈಯಕ್ತಿಕ ವಿಭಾಗದ ಕ್ರೀಡೆಗಳು ನಡೆಯಲಿವೆ. ಯುವ ಸಂಭ್ರಮದಂತೆಯೇ ದಸರೆಗೂ ಮುನ್ನವೇ ಕ್ರೀಡಾಕೂಟವನ್ನು ಆಯೋಜಿಸಿ ಅಂತಿಮ ಹಂತದ ಪಂದ್ಯಗಳನ್ನು ದಸರೆ ವೇಳೆ ಹಮ್ಮಿಕೊಂಡರೆ ವಸತಿ ವ್ಯವಸ್ಥೆಯನ್ನು ಉತ್ತಮವಾಗಿ ಕಲ್ಪಿಸಬಹುದು. ಅಂತಿಮ ಘಟ್ಟದ ಸ್ಪರ್ಧೆಗಳಲ್ಲಿ 1,500 ಮಂದಿ ಭಾಗವಹಿಸುವ ಅಂದಾಜಿದೆ. ’ ಎಂದು ವಿವರಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ನಾಗೇಂದ್ರ, ‘ಅದ್ದೂರಿ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಗಮನವಹಿಸಬೇಕು. ಅನಗತ್ಯ ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕು’ ಎಂದರು.
ಕ್ರೀಡಾ ಇಲಾಖೆ ಆಯುಕ್ತ ಶಶಿಕುಮಾರ್‌, ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಸುಮಾರು 5 ಸಾವಿರ ಸ್ಪರ್ಧಿಗಳು ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಬರುವುದರಿಂದ, ಎಲ್ಲರಿಗೂ ವಸತಿ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆಸಬೇಕು. ಜಿಲ್ಲಾಡಳಿತದ ಸಲಹೆ ಉತ್ತಮವಾಗಿದೆ’ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಹರೀಶ್‌ ಗೌಡ, ಅನಿಲ್ ಚಿಕ್ಕಮಾದು, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಹಾಗೂ ಅಧಿಕಾರಿಗಳು ಉಪಸ್ಧಿತರಿದ್ದರು.

Related