ಸ್ಯಾನಿಟೈಸರ್ ಸೇವಿಸಿ ಇಬ್ಬರ ಸಾವು

ಸ್ಯಾನಿಟೈಸರ್ ಸೇವಿಸಿ ಇಬ್ಬರ ಸಾವು

ಹುಬ್ಬಳ್ಳಿ : ಕೊರೊನಾ ವೈರಸ್ ಹರಡುವಿಕೆ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್‌ನಿಂದ ಸಮಾಜದಲ್ಲಿ ಅದರಲ್ಲೂ ವ್ಯಸನಿಗಳಲ್ಲಿ ಅಡ್ಡ ಪರಿಣಾಮಗಳು ಬೀರುತ್ತಿದ್ದು, ಮದ್ಯ ಸಿಗದೇ ಸ್ಯಾನಿಟೈಸರ್ ಸೇವಿಸಿ ಇಬ್ಬರು ಮೃತಪಟ್ಟಿದ್ದಾರೆ.

ಇದು ಸಮಾಜಕ್ಕೆ ಎಚ್ಚರಿಕೆ ಸಂದೇಶವನ್ನೇ ರವಾನಿಸಿದೆ. ಇದರೊಂದಿಗೆ ಸರಕಾರಕ್ಕೆ ಹೊಸದೊಂದು ತಲೆನೋವು ಶುರುವಾದಂತಾಗಿದೆ. ಅಲ್ಲದೇ ಈ ಇಬ್ಬರು ಸ್ಯಾನಿಟೈಸರ್‌ಗೆ ಬಲಿಯಾಗುವ ಮೂಲಕ ಕರ್ನಾಟಕದಲ್ಲಿ ಮೊದಲ ಪ್ರಕರಣಗಳು ದಾಖಲಾದಂತಾಗಿದೆ.

ಮಾಹಿತಿ ಪ್ರಕಾರ ತಮಿಳುನಾಡಿನಲ್ಲಿ ಮೂವರು ಸ್ಯಾನಿಟೈಸರ್ ಸೇವಿಸಿ ಬಲಿಯಾಗಿದ್ದು, ದೇಶದಲ್ಲೇ ಐದು ಪ್ರಕರಣಗಳು ಸೇರ್ಪಡೆಯಾದಂತಾಗಿದೆ. ಸ್ಯಾನಿಟೈಸರ್ ಸೇವನೆಯಿಂದ ಭಾನುವಾರ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದು ಈ ಸಾವಿಗೆ ಹೊಣೆ ಯಾರು? ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

ಜಿಲ್ಲೆಯ ಕಲಘಟಗಿ ತಾಲೂಕು ಗಂಭ್ಯಾಪುರ ಗ್ರಾಮದ ಒಂದೇ ಕುಟುಂಬದ ಇಬ್ಬರು ಮದ್ಯ ವ್ಯಸನಿಗಳು ಸ್ಯಾನಿಟೈಸರ್‌ಗೆ ಬಲಿಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. 45 ವರ್ಷದ ಬಸವರಾಜ ಎಂಬವವರು 12 ವರ್ಷದಿಂದ ಮದ್ಯವ್ಯಸನಿಯಾಗಿದ್ದು, ಮದ್ಯ ಸಿಗದೇ ಕಂಗಾಲಾಗಿದ್ದರು. ಲಾಕ್‌ಡೌನ್‌ನಿಂದ ಬಡವರು ಹಸಿವಿನಿಂದ ಬಳಲಬಾರದು ಮತ್ತು ಕೊರೊನಾ ವೈರಸ್‌ನಿಂದ ಶುಚಿಯಾಗಿರಬೇಕೆಂದು ಆಹಾರ ಧಾನ್ಯದ ಜತೆ ಸ್ಯಾನಿಟೈಸರ್‌ ನ್ನುದಾನಿಗಳು ವಿತರಿಸಿದ್ದರು.

ಮದ್ಯ ಸಿಗದೇ ಮಾನಸಿಕ ಸ್ಥಿಮಿತ ಕಳೆದುಕೊಂಡಂತಾಗಿದ್ದ ವ್ಯಕ್ತಿಯು, ಸ್ಯಾನಿಟೈಸರ್‌ನಲ್ಲಿ ಮದ್ಯ ಇದೆ ಎಂದುಕೊಂಡು ಮೂರು ದಿನಗಳ ಹಿಂದೆಯಷ್ಟೇ ಸ್ಯಾನಿಟೈಸರ್ ಸೇವಿಸಿ ಮದ್ಯದ ಅಮಲು ಏರಿಸಿಕೊಳ್ಳಲು ಪ್ರಯತ್ನಿಸಿದ್ದರು. ಸ್ಯಾನಿಟೈಸರ್ ಸೇವಿಸಿದ್ದ ಅದೇ ಕುಟುಂಬದ ಜಂಬವ್ವ ಈರಪ್ಪ ಕಟ್ಟಿಮನಿ ಸಹ ಭಾನುವಾರ ಸಾವಿಗೀಡಾಗಿದ್ದಾರೆ. ಮೂರು ದಿನಗಳಿಂದ ಸ್ಯಾನಿಟೈಸರ್ ಸೇವಿಸಿದ್ದ ಈ ಇಬ್ಬರು ವಾಂತಿ ಬೇಧಿ, ಉಸಿರಾಟ ತೊಂದರೆ ಕಾಣಿಸಿಕೊಂಡಾಗ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ಗೆ ಸೇರಿಸಿದರೂ, ಚಿಕಿತ್ಸೆ ಫಲಿಸಲಿಲ್ಲ.

Related