8 ತಿಂಗಳು ಮೊದಲೇ ವೈಎಸ್‌ಆರ್‌ ಹೆಸರು ಘೋಷಣೆ

  • In State
  • July 19, 2022
  • 207 Views
8 ತಿಂಗಳು ಮೊದಲೇ ವೈಎಸ್‌ಆರ್‌ ಹೆಸರು ಘೋಷಣೆ

ಅಮರಾವತಿ ಜು19: ಮುಂದಿನ ವರ್ಷ 2023ರ ಮಾರ್ಚ್‌ನಲ್ಲಿ ಆಂಧ್ರಪ್ರದೇಶದ ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರು ಈಗಲೇ ಘೋಷಿಸಿದ್ದಾರೆ.

8 ತಿಂಗಳು ಮೊದಲೇ ವೈಎಸ್‌ಆರ್‌ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವುದು ಆಂಧ್ರ ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.

ವಿಧಾನಪರಿಷತ್‌ನ ಮೂರು ಪದವೀಧರ ಕ್ಷೇತ್ರಗಳು 2023 ಮಾರ್ಚ್‌ನಲ್ಲಿ ತೆರವಾಗಲಿವೆ. ಈ ಕ್ಷೇತ್ರಗಳಿಗೆ ಸೋಮವಾರ ಸಂಜೆ ಸಿಎಂ ರೆಡ್ಡಿ ಅವರು ಟಿಕೆಟ್‌ಗಳನ್ನು ಅಂತಿಮ ಮಾಡಿ ಪಟ್ಟಿ ಬಿಡುಗಡೆ ಮಾಡಿದರು.

ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣಂ ಪದವೀಧರ ಕ್ಷೇತ್ರಕ್ಕೆ ಸದ್ಯ ಸರ್ಕಾರದಲ್ಲಿ ಬ್ರಾಹ್ಮಣರ ನಿಗಮದ ಅಧ್ಯಕ್ಷರಾಗಿರುವ ಎಸ್.ಸುಧಾಕರ್ ಅವರಿಗೆ ಮೇಲ್ಮನೆ ಟಿಕೆಟ್ ನೀಡಲಾಗಿದೆ.

ಪ್ರಕಾಶಂ, ನೆಲ್ಲೂರು, ಚಿತ್ತೂರು ಪದವೀಧರ ಕ್ಷೇತ್ರಕ್ಕೆ ಪ್ರಕಾಶಂನ ವೈಎಸ್‌ಆರ್ ಕಾಂಗ್ರೆಸ್ ಮುಖಂಡ ಶಾಮ್ ಪ್ರಸಾದ್ ರೆಡ್ಡಿ ಅವರಿಗೆ ಟಿಕೆಟ್ ನೀಡಲಾಗಿದೆ.

ಕರ್ನೂಲ್, ಕಡಪಾ, ಅನಂತಪುರ ಪದವೀಧರ ಕ್ಷೇತ್ರಕ್ಕೆ ಹಾಲಿ ಶಾಸಕರಾಗಿರುವ ವಿ.ರವೀಂದ್ರ ರೆಡ್ಡಿ ಅವರಿಗೆ ಟಿಕೆಟ್ ಕೊಡಲಾಗಿದೆ.

ಮುಂದಿನ ವರ್ಷದ ಫೆಬ್ರುವರಿ ಅಥವಾ ಮಾರ್ಚ್‌ನಲ್ಲಿ ವಿಧಾನಪರಿಷತ್‌ನ ಪದವೀದರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಇದುವರೆಗೆ ಚುನಾವಣೆಯಲ್ಲಿ ಕೊನೆಕ್ಷಣದಲ್ಲಿ ಟಿಕೆಟ್ ಘೋಷಣೆ ಮಾಡುತ್ತಿದ್ದ ಜಗನ್ಮೋಹನ್ ರೆಡ್ಡಿ ಅವರ ಈ ನಡೆ ಸ್ವಪಕ್ಷಿಯರಿಗಲ್ಲದೇ ವಿರೋಧ ಪಕ್ಷಗಳಲ್ಲೂ ಅಚ್ಚರಿ ತರಿಸಿದೆ.

ಈ ಕ್ಷೇತ್ರಗಳಿಗೆ ಮೊದಲೇ ಟಿಕೆಟ್ ಘೋಷಣೆ ಮಾಡುವುದರಿಂದ ಅಭ್ಯರ್ಥಿಗಳಿಗೆ ಚುನಾವಣಾ ಪೂರ್ವ ತಯಾರಿ ನಡೆಸಲು ಅನುಕೂಲ ಆಗಲಿದೆ ಎನ್ನಲಾಗಿದೆ.

Related