ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಶಾಸಕ ಬಸವರಾಜ್ ಯತ್ನಾಳ್ ಅವರು ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಪದೇ ಪದೇ ಒಂದಲ್ಲ ಒಂದು ಆರೋಪವನ್ನು ಮಾಡುತ್ತಿರುವುದು ನಮಗೆಲ್ಲ ಗೊತ್ತಿರುವ ಸಂಗತಿ.
ಆದರೆ ಈ ಬಾರಿ ಲೋಕಸಭಾ ಕಣಕ್ಕೆ ಬಾಗಲಕೋಟೆ ಲೋಕಸಭಾದಿಂದ ಯತ್ನಾಳ್ ಅವರನ್ನು ಇಳಿಸಲು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೈಕಮಾಂಡ್ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ ಎಂದು ರಾಜ್ಯ ರಾಜಕೀಯದಲ್ಲಿ ಗ್ರಾಸವಾಗಿ ಚರ್ಚೆಯಾಗುತ್ತಿದೆ ಎಂದು ತಿಳಿದು ಬಂದಿದೆ.
ಯತ್ನಾಳ್ ಅವರನ್ನು ದೆಹಲಿ ರಾಜಕಾರಣಕ್ಕೆ ಕಳುಹಿಸುವ ಕುರಿತು ತೆರೆಮರೆಯಲ್ಲಿ ಪ್ಲಾನ್ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ವತಃ ಯಡಿಯೂರಪ್ಪ ಅವರೇ ಯತ್ನಾಳ್ ಅವರಿಗೆ ಲೋಕಸಭಾ ಚುನಾವಣೆಯ ಟಿಕೆಟ್ ಕೊಡಿಸಲು ಚಿಂತನೆ ನಡೆಸಿದ್ದಾರಂತೆ. ಇತ್ತ ಹೈಕಮಾಂಡ್ ಸಹ ಈ ಬಗ್ಗೆ ಯೋಚನೆ ಮಾಡಿಕೊಂಡಿದೆ ಎಂದು ಹೇಳಲಾಗಿದೆ.